ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆಯ ಆರ್ಭಟ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರಾವಳಿ, ಮಲೆನಾಡು ಭಾಗ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗ ಸೇರಿದಂತೆ ಎಲ್ಲೆಡೆ ಮಳೆ ತುಂಬಾ ಜೋರಿನಿಂದ ಕೂಡಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಲಬುರಗಿ, ಯಾದಗಿರಿ ಸೇರಿದಂತೆ ಎಲ್ಲೆಡೆ ಮಳೆ ಆವಂತರ ಸೃಷ್ಟಿಸಿದೆ.
ಉತ್ತರ ಕನ್ನಡದಲ್ಲಿ ದೋಣಿ ಮಗುಚಿ ವೃದ್ಧೆ ಸಾವು, ದನಗಳಿಗೆ ಮೇವು ಹಾಕಲು ಹೋದ 65 ವರ್ಷದ ಬಸವನಗೌಡ ಮಣ್ಣಿನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಯಲ್ಲಾಪುರ ಬಳಿಯ ಶಿರ್ಲಾ ಫಾಲ್ಸ್ ನೋಡಲು ಹೋದ 6 ಜನ ಯುವಕರು ನಾಪತ್ತೆಯಾಗಿದ್ದಾರೆ. ಅಂಕೋಲದ ಶಿರೂರಲ್ಲಿ ವೃದ್ಧೆ ಸಾವು.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಜಿಲ್ಲೆಯ 11 ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ ಯಮಗರಣಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಖಾನಾಪೂರ ತಾಲೂಕಿನ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಯೇ ಜಲಾವೃತವಾಗಿದೆ.
ಇನ್ನು ಭದ್ರಾ ಜಲಾಶಯದಿಂದ 8 ಗೇಟುಗಳ ಮೂಲಕ 42.175 ಕ್ಯೂಸೆಕ್ ನೀರನ್ನ ಕಾಳಿ ನದಿಗೆ ಬಿಡಲಾಗಿದೆ. ಇದರ ಪರಿಣಾಮ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೊಡಗು ಮತ್ತೆ ನಲುಗಿ ಹೋಗಿದೆ. ಶಂಠಿಕೊಪ್ಪ ಸೇರಿ 50 ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಉದಯಗಿರಿಯಲ್ಲಿ ಭೂಕುಸಿತವಾಗಿದೆ. ಹೀಗೆ ಎಲ್ಲೆಡೆ ವರಣುದೇವ ಆವಾಂತರ ಸೃಷ್ಟಿಸಿದ್ದಾನೆ. ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಆಗ್ತಿದೆ.