ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ನಾನೊಬ್ಬ ಬಡಪಾಯಿ ಶೆಟ್ಟರ್. ನನ್ನನ್ನು ಸೋಲಿಸಲು ಬಿಜೆಪಿ ಅಭಿಯಾನ ನಡೆಸುತ್ತಿದೆ. ನಾನು ಮೊದಲೇ ಹೇಳಿದ್ದೇನೆ, ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದಿಂದ ಹೊರ ಬಂದಿದ್ದೇನೆ ಹೊರತು ಮತ್ಯಾವ ಕಾರಣಕ್ಕೂ ಅಲ್ಲವೆಂದು. ಆದರೂ ನನ್ನ ಮೇಲೆ ಯಾಕಿಷ್ಟು ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಬರೀ ಹುಬ್ಬಳ್ಳಿಗೆ ಸಿಮೀತವಲ್ಲ. ಈ ಕ್ಷೇತ್ರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತೆ. ಅಮಿತ್ ಶಾ ಅವರು ಇಲ್ಲಿಗೆ ಬಂದು ನನ್ನನ್ನು ಸೋಲಿಸಲು ಕರೆ ನೀಡುತ್ತಾರೆ. ಯಡಿಯೂರಪ್ಪನವರು ಪ್ರಮುಖರ ಸಭೆ ನಡೆಸಿ ಸೋಲಿಸಲು ಆಂದೋಲನ ನಡೆಸಿದ್ದಾರೆ.
ನಾನೊಬ್ಬನೆ ಬಿಜೆಪಿ ತೊರೆದಿಲ್ಲ. ಸವದಿ, ಆಯನೂರ ಮಂಜುನಾಥ, ಎನ್.ಆರ್ ಸಂತೋಷ್ ಸೇರಿ ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾನೇನೋ ಅಪರಾಧ ಮಾಡಿದವನಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನನ್ನ ವಿರುದ್ಧ ಯಾರು ಎಷ್ಟೇ ಟೀಕೆ ಮಾಡಲಿ. ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಚಾರ ಮಾಡುತ್ತಿದ್ದೇನೆ. 7ನೇ ಬಾರಿಗೆ ಶಾಸಕನಾಗುವ ವಿಶ್ವಾಸವಿದೆ ಎಂದರು.