ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಟ ದರ್ಶನ್ ಹಾಗೂ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ನಡುವೆ ತಾಯಿ, ಮಗನ ಸಂಬಂಧವಿದೆ. ನಟ ದರ್ಶನ್ ಅಂಬರೀಶ್ ಕುಟುಂಬದ ಜೊತೆಗಿನ ನಂಟಿನ ಬಗ್ಗೆ ಸದಾ ಹೇಳುತ್ತಲೇ ಇರುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿದಾಗ ನಟರಾದ ದರ್ಶನ್, ಯಶ್ ಸಾಥ್ ನೀಡಿ ಗೆಲುವು ಸಾಧಿಸುವಲ್ಲಿ ಶ್ರಮ ವಹಿಸಿದ್ದರು.
ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗುತ್ತೆ ಎನ್ನುವ ಆತ್ಮವಿಶ್ವದಲ್ಲಿದ್ದ ಸುಮಲತಾಗೆ ನಿರಾಸೆಯಾಗಿದೆ. ಮಂಡ್ಯಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಬಾರಿ ನಾನು ಸ್ಪರ್ಧಿಸುತ್ತಿಲ್ಲವೆಂದು ಸುಮಲತಾ ಹೇಳಿದ್ದಾರೆ. ಈ ವೇಳೆ ಮಾತನಾಡಿದ್ದ ದರ್ಶನ್, ನಮ್ಮಮ್ಮ ಏನೇ ನಿರ್ಧಾರ ತೆಗೆದುಕೊಂಡರು ಅವರೊಂದಿಗೆ ಇರುತ್ತೇನೆ. ಯಮ ಬಂದು ಕರೆದರೂ ಇರಯ್ಯ ನಮ್ಮಮ್ಮನದ್ದು ಒಂದು ಕೆಲಸ ಇದೆ ಮಾಡಿ ಬರ್ತಿನಿ. ಅವರು ಹಾಳು ಬಾವಿಗೆ ಬೀಳಂದ್ರೂ ಬೀಳ್ತೀನಿ ಅಂದಿದ್ದರು.
ಕುಮಾರಸ್ವಾಮಿ ಪರವಾಗಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿ ಸುಮಲತಾ ಇದ್ದಾರೆ. ಆದರೆ, ಇದೀಗ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಖ್ಯಾತಿಯ ವೆಂಕಟರಮಣೇಗೌಡ ಪರ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಹಲಗೂರು ಪಟ್ಟಣದಿಂದ ಪ್ರಚಾರ ಶುರು ಮಾಡಲಿದ್ದಾರೆ. ಮದರ್ ಇಂಡಿಯಾ ಅವರ ಸಧ್ಯದ ರಾಜಕೀಯ ಪರಿಸ್ಥಿತಿ ಗೊತ್ತಿದ್ದೂ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ ಅಂದರೆ ಇದಕ್ಕೆ ಸುಮಲತಾ ಅವರ ಒಪ್ಪಿಗೆ ಇದೇನಾ? ಸೈಲೆಂಟ್ ಆಗಿಯೇ ತಮಗೆ ಆಗಿರುವ ಅನ್ಯಾಯದ ವಿರುದ್ಧ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರ ಎಂಬ ಕುತೂಹಲ ಮೂಡಿದೆ.
ಹುಸ್ಕೂರು, ಹಾಡಿ ಸರ್ಕಲ್, ಪೂರಿಗಾಲಿ, ಮಳವಳ್ಳಿ ಪಟ್ಟಣ, ಟಿ.ಕಾಗೇಪುರ, ಬೊಪ್ಪೇಗೌಡನಪುರ, ಹಿಟ್ಟನಳ್ಳಿ ಕೊಪ್ಪಲು, ಕಿರುಗಾವಲು ಸಂತೆಮಾಳ, ಸರಗೂರು ಹ್ಯಾಂಡ್ ಪೋಸ್ಟ್ ಸೇರಿದಂತೆ ಅನೇಕ ಕಡೆ ಪ್ರಚಾರ ಮಾಡಲಿದ್ದಾರೆ. ಅಮ್ಮ ಏನೇ ಹೇಳಿದರೂ ಕೇಳ್ತೀನಿ. ಅವರೊಂದಿಗೆ ಯಾವಾಗಲೂ ಇರ್ತಿನಿ ಎನ್ನುವ ದರ್ಶನ್ ಈ ನಡೆಯ ಹಿಂದಿನ ಮರ್ಮ ಏನು ಅನ್ನೋ ಕುತೂಹಲ ಮೂಡಿದೆ. 2019ರ ಚುನಾವಣೆಯಲ್ಲಿಯೇ ಜೆಡಿಎಸ್ ವಿರುದ್ಧ ಹೋರಾಟ ಮಾಡಿದ್ದ ಸುಮಲತಾ ಈ ಬಾರಿ ಒಳ ಏಟು ಕೊಡಲು ಪ್ಲಾನ್ ಮಾಡಿದ್ದಾರ ಅನ್ನೋ ಪ್ರಶ್ನೆ ಮೂಡಿದೆ. ಶೀಘ್ರದಲ್ಲೇ ಇದಕ್ಕೆ ಉತ್ತರ ಸಿಗಲಿದೆ.