ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ

75

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಬಿಜೆಪಿ-ಜೈಡಿಎಸ್ ಮೈತ್ರಿಯಿಂದಾಗಿ ಸ್ವಕ್ಷೇತ್ರ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶಗೆ ಹಿನ್ನಡೆಯಾಗಿದೆ. ಬಿಜೆಪಿ ಟಿಕೆಟ್ ಸಿಗುತ್ತೆ ಎಂದು ಹೇಳುತ್ತಲೇ ಇದ್ದರು. ಆದ್ರೆ, ಮಂಡ್ಯ ಜೆಡಿಎಸ್ ಪಾಲಾಗಿ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಸಂಸದೆ ಸುಮಲತಾ ಮುಂದಿನ ನಡೆ ಏನು ಅನ್ನೋ ಪ್ರಶ್ನೆಗೆ ಇಂದು ಉತ್ತರ ನೀಡಿದ್ದಾರೆ.

ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಬೆಂಬಲಿಗರ ಸಭೆ ಕರೆದು ಮಾತನಾಡಿದ ಅವರು, ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನನಗೆ ಐತಿಹಾಸಿಕ ಗೆಲುವು ನೀಡಿದೀರಿ. ಐದು ವರ್ಷಗಳಿಂದ ನನ್ನ ಜೊತೆಗಿರುವ ಎಲ್ಲರಿಗೂ ವಂದನೆಗಳು. ಹಠಕ್ಕೆ ಬಿದ್ದು ಚುನಾವಣೆಗೆ ಸ್ಪರ್ಧಿಸಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುತ್ತೇನೆ ಎಂದಿದ್ದಾರೆ.

2019ರಲ್ಲಿ ಬೇರೆ ಸವಾಲಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ರೀತಿಯ ಸವಾಲಿದೆ. ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲು ಹೇಳಿದರು. ನಾನು ಗೆದ್ದರೂ, ಸೋತರೂ ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದೆ. ನೀವು ನನಗೆ ತಾಯಿ ಸ್ಥಾನ ನೀಡಿದ್ದೀರಿ. ತಾಯಿಯನ್ನು ಮಕ್ಕಳಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದರು.

ನಾನು ಕಾಂಗ್ರೆಸ್ ಸೇರುವುದಿಲ್ಲ. ರಾಷ್ಟ್ರೀಯ ಪಕ್ಷವೊಂದು ನನ್ನ ಬೆಂಬಲಕ್ಕಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ ನೋಡುತ್ತೀರಿ ಅಂತಾ ಹೇಳಿದರು. ಈ ವೇಳೆ ನಟ ದರ್ಶನ್, ಪುತ್ರ ಅಭಿಷೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!