ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭೆಯಲ್ಲಿ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಮಂಡ್ಯ ಒಂದಾಗಿದೆ. 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್, ಕಳೆದೊಂದು ವರ್ಷಕ್ಕೂ ಹೆಚ್ಚಿನ ದಿನಗಳಿಂದ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಅಂತಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮಂಡ್ಯ ಜೆಡಿಎಸ್ ಪಾಲಾಗಿದೆ ಅನ್ನೋದು ಖಚಿತವಾಗಿದೆ. ಯಾಕಂದರೆ, ಕುಮಾರಸ್ವಾಮಿ ಮಾರ್ಚ್ 25ಕ್ಕೆ ಬಂದು ಅಭ್ಯರ್ಥಿ ಹೆಸರು ಘೋಷಿಸುವುದಾಗಿ ಹೇಳಿದ್ದಾರೆ. ಹೋದ ಚುನಾವಣೆಯಲ್ಲಾದ ಸೋಲಿನ ಅವಮಾನ ಇಂದಿಗೂ ಕಾಡುತ್ತಿದೆ. ಹೀಗಾಗಿ ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆಗೆ ಅಖಾಡ ಸಿದ್ಧ ಮಾಡಿದ್ದಾರೆ. ಹೀಗಾಗಿ ಸುಮಕ್ಕಗೆ ಇಲ್ಲಿ ಟಿಕೆಟ್ ಮಿಸ್ ಆಗಿದೆ.
ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ ಎನ್ನುತ್ತಿರುವ ಸಂಸದೆ ಸುಮಲತಾಗೆ ಚಿಕ್ಕಬಳ್ಳಾಪುರದ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹೈಕಾಂಡ್ ಹೇಳುತ್ತಿದೆಯಂತೆ. ಇಲ್ಲಿಯ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇಲ್ಲಿ ಮಾಜಿ ಸಚಿವ ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕಗೆ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ.
ಒಂದು ವೇಳೆ ಸುಮಲತಾ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದರೆ ಅವರಿಗೆ ಯಾರೆಲ್ಲ ಬೆಂಬಲ ನೀಡುತ್ತಾರೆ ಎನ್ನುವ ಪ್ರಶ್ನೆ ಇದೆ. ಇಲ್ಲಿ ಒಕ್ಕಲಿಗ ಹಾಗೂ ಬಲಿಜ ನಾಯ್ಡು ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಗಂಡನ ಕಡೆಯಿಂದ ಒಕ್ಕಲಿಗ ಸಮುದಾಯ, ತವರು ಮನೆಯ ಕಡೆಯಿಂದಾದರೆ ನಾಯ್ಡು. ಹೀಗಾಗಿ ಸುಮಲತಾಗೆ ಇಲ್ಲಿ ಪ್ಲಸ್ ಆಗುತ್ತೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಇದಕ್ಕೆ ಅವರು ಸಿದ್ಧರಾಗಿದ್ದಾರ? ಚಿಕ್ಕಬಳ್ಳಾಪುರದ ಅಭ್ಯರ್ಥಿಯಾದರೆ ಟಿಕೆಟ್ ಆಕಾಂಕ್ಷಿಗಳಾಗಿದ್ದವರ ನಡೆ ಏನು? ಜೆಡಿಎಸ್ ನಾಯಕರು ಪ್ರಚಾರಕ್ಕೆ ಬರುತ್ತಾರ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.