ಬೆಳಗಾವಿ: ಗಣೇಶ ಹಬ್ಬಕ್ಕೆ ಒಂದು ದಿನ ಬಾಕಿ ಇದೆ. ಸೋಮವಾರ ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಲಿದೆ. ಹೀಗಾಗಿ ಇಂದು ಮುಂಜಾನೆ ಬೆಳಗಾವಿಯಲ್ಲಿ ಬೃಹತ್ ಗಣೇಶ ಮೂರ್ತಿಯನ್ನ ತೆಗೆದುಕೊಂಡು ಹೋಗುವಾಗ ಅನಾಹುತವೊಂದು ನಡೆದು ಹೋಗಿದೆ.
ಬೆಳಗಾವಿ ನಗರದಿಂದ ಮತ್ತೊಂದು ಊರಿಗೆ ಬೃಹತ್ ಗಣೇಶ ಮೂರ್ತಿ ತೆಗೆದುಕೊಂಡು ಹೋಗುವಾಗ ಭಾಗ್ಯನಗರ ಮಾರ್ಗದಲ್ಲಿ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಟ್ರ್ಯಾಕ್ಟರ್ ನಲ್ಲಿ ಸಾಗಿಸ್ತಿದ್ದ ಮೂರ್ತಿಯ ತಲೆಗೆ ವಿದ್ಯುತ್ ತಂತಿ ತಗುಲಿದೆ. ಪ್ಲಾಸ್ಟಿಕ್ ಮುಚ್ಚಿದ್ರಿಂದ ಬೆಂಕಿ ಹೊತ್ತಿಕೊಂಡಿದೆ. ಇದ್ರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೂರ್ತಿಗೆ ವಿದ್ಯುತ್ ತಂತಿ ತಗುಲುತ್ತೆ ಅನ್ನೋದು ಗೊತ್ತಿದ್ರೂ ಹುಚ್ಚು ಧೈರ್ಯ ಮಾಡಿ ಟ್ರ್ಯಾಕ್ಟರ್ ಚಲಾವಣೆ ಮಾಡಿದ್ದಾರೆ. ಹೀಗಾಗಿ ಈ ಅನಾಹುತ ನಡೆದಿದೆ. ಗಣೇಶ ಮಂಡಳಿಯವರು ಮೂರ್ತಿ ಸಾಗಿಸುವ ಮಾರ್ಗದಲ್ಲಿ ವಿದ್ಯುತ್ ಕಡಿತಗೊಳಿಸುವ ಕುರಿತು ಸ್ಥಳೀಯ ಕೆಇಬಿಗೆ ತಿಳಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುವುದು ಮುಖ್ಯವಾಗಿದೆ.