ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಭಾನುವಾರ ಒಂದೇ ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಬರೋಬ್ಬರಿ 22 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಜಿಲ್ಲಾಧಿಕಾರಿ ಎನ್.ರವಿ ಅವರು ಬೇರೆಯದ್ದೆ ಕಾರಣ ನೀಡ್ತಿದ್ದಾರೆ. ಇದರ ಜೊತೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಡೆ ಬೊಟ್ಟು ಮಾಡಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ ಅವರು, ಎಲ್ಲರೂ ಕೋವಿಡ್ ನಿಂದ ಮೃತಪಟ್ಟಿಲ್ಲ. ಬೇರೆ ಬೇರೆ ಕಾರಣಗಳಿಗೆ ಸಾವನ್ನಪ್ಪಿದ್ದವರ ಸಂಖ್ಯೆ ಹೆಚ್ಚಿದೆ ಎನ್ನುತ್ತಿದ್ದಾರೆ. ಅತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೈಸೂರು ಡಿಸಿ, ಚಾಮರಾಜನಗರ ಡಿಸಿ ಅವರನ್ನ ತರಾಟೆ ತೆಗೆದುಕೊಳ್ತಿದ್ದಾರೆ. ಹಾಗಾದ್ರೆ, ಈ ದುರಂತದಲ್ಲಿ ಬರೀ ಅಧಿಕಾರಿಗಳ ಪಾತ್ರ ಮಾತ್ರ ಇದ್ಯಾ ಅನ್ನೋ ಪ್ರಶ್ನೆ ಇದೆ.
ಭಾನುವಾರ ರಾಜ್ಯದ ಉಪ ಕದನದ ಫಲಿತಾಂಶದಲ್ಲಿ ಎಲ್ಲರೂ ಬ್ಯುಸಿಯಾಗಿದ್ರು. ಇದರ ಜೊತೆ 5 ರಾಜ್ಯಗಳ ಚುನಾವಣೆ ಫಲಿತಾಂಶದ ಕಡೆಯೂ ಗಮನ. ಯಾರಿಗೂ ಕೋವಿಡ್ ಬಗ್ಗೆ ಲಕ್ಷ್ಯವೇ ಇಲ್ಲ. ಇದರ ಬಗ್ಗೆ ಚರ್ಚೆಯೂ ಇಲ್ಲ. ಎಲ್ಲಿ ಏನು ಸಮಸ್ಯೆಯಾಗ್ತಿದೆ ಅನ್ನೋದರ ಕುರಿತು ಯಾವ ಸಚಿವರು, ಶಾಸಕರು ಎಷ್ಟು ಗಮನ ಹರಿಸಿದ್ದಾರೆ ಅನ್ನೋದು ಸಹ ಮುಖ್ಯವಾಗುತ್ತೆ. ಇದನ್ನು ಬಿಟ್ಟು ಬರೀ ಅಧಿಕಾರಿಗಳನ್ನ ಹೊಣೆ ಮಾಡಿ ಜನಪ್ರತಿನಿಧಿಗಳು ನುಣಿಚಿಕೊಳ್ಳುವ ಕೆಲಸ ಮಾಡಬಾರದು.