ಪ್ರಜಾಸ್ತ್ರ ಸುದ್ದಿ
ಶಿರಸಿ: ರಾಜ್ಯ ಸರ್ಕಾರ ಕೆಡವಲು ಸಿಂಗಾಪುರದಲ್ಲಿ ಕುಳಿತು ತಂತ್ರ ಹೆಣೆಯಲಾಗಿದೆ ಎಂದು ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸಿಎಂ ಸ್ಥಾನದಲ್ಲಿರುವ ಡಿ.ಕೆ ಶಿವಕುಮಾರ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದಿದ್ದಾರೆ.
ಅನಗತ್ಯ ಹೇಳಿಕೆ ನೀಡುವ ಬದಲು, ಯಾರು ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಧೈರ್ಯವಿದ್ದರೆ ಹೆಸರು ಹೇಳಬೇಕು. ಗ್ಯಾರೆಂಟಿಗಳ ಮೂಲಕ ಜನರನ್ನು ಭ್ರಮಾಲೋಕದಲ್ಲಿ ಮುಳುಗಿಸುತ್ತಿದೆ. ಇದೊಂದು ರೀತಿ ಮಾಯಾ ಬಜಾರ್ ಸರ್ಕಾರವಾಗಿದೆ. ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ನಡೆಯುತ್ತಿಲ್ಲ ಅಂತಾ ಕಿಡಿ ಕಾರಿದರು.
ಯಾವುದೇ ಇಲಾಖೆಗಳಲ್ಲಿ ಜನರಿಗೆ ಸರಿಯಾದ ಸ್ಪಂದನೆ ಇಲ್ಲ. ಐದು ಉಚಿತ ಗ್ಯಾರೆಂಟಿ ಎಂದು ಹೇಳುತ್ತಾ, ಇನ್ನೊಂದು ಕಡೆ ಬೆಲೆ ಏರಿಕೆ ಮಾಡುತ್ತಿದೆ. ಈ ಮೂಲಕ ಜನರ ಜೀವನದ ಜೊತೆ ಆಟವಾಡುತ್ತಿದೆ ಅಂತಾ ಹೇಳಿದರು. ಈ ವೇಳೆ ಜಿಲ್ಲೆಯ, ತಾಲೂಕಿನ ಪಕ್ಷದ ಮುಖಂಡರು ಹಾಜರಿದ್ದರು.