ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗ್ಯಾಸ್ ಗೀಸರ್ ನಿಂದ ವಿಷ ಅನಿಲ ಸೋರಿಕೆಯಾಗಿ ಜೋಡಿಯೊಂದು ಮೃತಪಟ್ಟಿರುವ ಘಟನೆ ಯಲಹಂಕ ತಾಲೂಕಿನ ತಬರನಹಳ್ಳಿಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಧಾರಾಣಿ ಮೃತ ದುರ್ದೈವಿಗಳು.
ಇವರಿಬ್ಬರಿಗೂ ಮದುವೆ ನಿಶ್ಚಿಯವಾಗಿದ್ದು, ಜೊತೆಯಲ್ಲಿ ಕಾಲ ಕಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಭಾನುವಾರ ಜೊತೆಯಾಗಿ ಸ್ನಾನ ಮಾಡಲು ಹೋದಾಗ ಗ್ಯಾಸ್ ಗೀಸರ್ ನಲ್ಲಿನ ಕಾರ್ಬನ್ ಮೊನಾಕ್ಸೆಡ್ ಸೋರಿಕೆಯಾಗಿದೆ. ಇದರಿಂದ ಪ್ರಜ್ಞೆ ತಪ್ಪಿಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮನೆಯಿಂದ ಯಾರೂ ಹೊರ ಬರದೆ ಇದ್ದಾಗ ಮನೆ ಮಾಲೀಕರು ಬಾಗಿಲು ಬಡಿದಿದ್ದಾರೆ. ಯಾರೂ ತೆಗೆಯದಿದ್ದಾಗ ಅನುಮಾನ ಬಂದು ಬಾಗಿಲು ಮುರಿಯಲಾಗಿದೆ. ಆಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಅವರು ಬಂದು ಪರಿಶೀಲನೆ ಮಾಡಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.