ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗ್ರಾಮ ಒನ್ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಸಸಿಗೆ ನೀರುಣಿಸುವ ಮೂಲಕ ಅವರ ಕನಸಿನ ಯೋಜನೆಗೆ ಚಾಲನೆ ನೀಡಿದರು. ಈ ಮೂಲಕ ಮೊದಲ ಹಂತದಲ್ಲಿ 12 ಜಿಲ್ಲೆಗಳ 3 ಸಾವಿರ ಗ್ರಾಮಗಳಲ್ಲಿ ಗ್ರಾಮ ಒನ್ ಸೇವೆ ಸಿಗಲಿದೆ.
ಗ್ರಾಮ ಒನ್ ಯೋಜನೆ ಕ್ರಾಂತಿಕಾರಿಯಾಗಿದೆ. ಜನರ ಬಳಿಯೇ ಸೇವೆಯನ್ನು ತೆಗೆದುಕೊಂಡು ಹೋಗುವುದು ಆಗಿದೆ. ಇದಕ್ಕಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ 12 ಜಿಲ್ಲೆಗಳ 3 ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಪ್ರಾರಂಭವಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಈ ಯೋಜನೆ ಅಡಿಯಲ್ಲಿ ಇನ್ಮುಂದೆ ಗ್ರಾಮ ಪಂಚಾಯ್ತಿಗಳಲ್ಲೇ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ತಿದ್ದುಪಡಿ, ಬ್ಯಾಕಿಂಗ್ ಸೇವೆ, ಸಕಾಲ ಸೇವೆಗಳು, ಆರ್ ಟಿಐ ಸೇವೆ, ಸೇವಾ ಸಿಂಧು ಯೋಜನೆಯ ಎಲ್ಲ ಸೇವೆಗಳು ಸೇರಿದಂತೆ 750ಕ್ಕೂ ಹೆಚ್ಚು ಸೇವೆಗಳು ಗ್ರಾಮ ಒನ್ ಕೇಂದ್ರದಲ್ಲಿ ಸಿಗಲಿವೆ. ಈ ಮೂಲಕ ಪಟ್ಟಣ, ನಗರಕ್ಕೆ ಅಲೆಯುವುದು ತಪ್ಪಲಿದೆ.