ಬೆಳಗಾವಿ: ಕಳೆದ ಎರಡು ತಿಂಗಳ ಹಿಂದೆ ಪ್ರವಾಹದಿಂದ ಹೈರಾಣದ ಕುಂದಾನಗರಿ ಜನತೆಗೆ ಇದೀಗ ಮತ್ತೆ ನೆರೆ ಹೊರೆ ಶುರುವಾಗಿದೆ. ಭಾನುವಾರ ಶುರುವಾದ ಮಳೆ ಇನ್ನೂ ಮುಂದುವರೆದಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಮನೆಯ ಗೋಡೆಯೊಂದು ಕುಸಿದಿದೆ. ಇದರ ಪರಿಣಾಮ ಮನೆಯಲ್ಲಿದ್ದ 55 ವರ್ಷದ ಲಿಯಾಕತ ಮಕಾನದಾರ ಎಂಬುವವರು ಸಾವನ್ನಪ್ಪಿದ್ದಾರೆ. ಇನ್ನು ರಾಮದುರ್ಗದ ಚಿಕ್ಕಹಂಪಿಹೊಳಿ, ಹಿರೇಹಂಪಿಹೊಳಿ ಸೇರಿ ಹಲವು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇನಾಮಹೊಂಗಲ ಬಳಿಯ ಸೇತುವೆ ಕುಸಿದಿದೆ. ಮಳೆಯ ರಭಸಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆಯಾಗಿದೆ. ಇದ್ರಿಂದಾಗಿ ಧಾರವಾಡ-ಸವದತ್ತಿ ಸಂಚಾರ ಬಂದ್ ಆಗಿದೆ.
ಬೈಲಹೊಂಗಲ ತಾಲೂಕಿನಲ್ಲಿಯೂ ಧಾರಾಕಾರವಾಗಿ ಮಳೆಯಾಗ್ತಿದೆ. ಚಿಕ್ಕೋಪ್ಪ ಗ್ರಾಮದ ಹತ್ತಿರದ ಸೇತುವೆ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಚಿಕ್ಕೋಪ್ಪದಿಂದ ಬೈಲಹೊಂಗಲ, ಅನಿಗೋಳ ಹಾಗೂ ಹೊಸೂರಿಗೆ ತೆರಳುವ ರಸ್ತೆ ಮಾರ್ಗ ಬಂದ್ ಆಗಿದೆ.