ಬೆಂಗಳೂರು: ಇಂದು ಕಲಾಪ ಶುರು. ಮತ್ತೆ ವಿಶ್ವಾಸಮತ ಯಾಚನೆಯ ಕುಸ್ತಿ ನಡೆಯಲಿದೆ. ಆದ್ರೆ, ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಹೇಗಾಗಿದೆ ಅಂದ್ರೆ, ದೆವ್ವಗಳು ರಾತ್ರಿ ವೇಳೆ ಮನೆಗೆ ಬರುತ್ತವೆ ಅನ್ನೋ ಭಯದಲ್ಲಿ ಹಳ್ಳಿಗಳಲ್ಲಿ ‘ನಾಳೆ ಬಾ’ ಅಂತಾ ಬಾಗಿಲು ಮೇಲೆ ಬರೆಯುವ ಕಾಲವಂದಿತ್ತು. ಆ ರೀತಿಯಾಗಿದೆ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪಡಿಸುವ ಸ್ಥಿತಿ.
ಬಿಜೆಪಿ ಉಸಿರು ಬಿಗಿ ಹಿಡಿದು ಶನಿವಾರ, ಭಾನುವಾರ ಕಳೆದಿದೆ. ದೋಸ್ತಿ ನಾಯಕರು ಸೋಮವಾರ ಯಾಕಾದ್ರೂ ಬರುತ್ತೆ ಅಂತಿದ್ರು. ಕಾಲ ಯಾರ ಮಾತು ಕೇಳೋದಿಲ್ಲ. ಸದನ ಕಲಾಪ ಶುರುವಾಗುತ್ತೆ. ವಿಶ್ವಾಸಮತ ಯಾಚನೆ ಮೇಲೆ ಮತ್ತೆ ಚರ್ಚೆಗಳು ನಡೆಯಲಿವೆ. ಇದರ ನಡುವೆ ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ. ಬಂದ್ಮೇಲೆ ಒಂದಿಷ್ಟು ಬದಲಾವಣೆಯಾಗಿ ಮತ್ತೊಂದಿಷ್ಟು ಹೈಡ್ರಾಮಾ ನಡೆಯುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.
ದೋಸ್ತಿ ಸರ್ಕಾರ ಕೆಡವಲು ಬಿಜೆಪಿಗೆ ತುಂಬಾ ಅವಸರವಿದೆ. ಅದಕ್ಕಿಂತ ಹೆಚ್ಚಾಗಿ ಮೀಡಿಯಾಗಳಿಗಿದೆ ಅಂತಾ ಕೆಲವರು ಆಡಿಕೊಳ್ತಿದ್ದಾರೆ. ಬಿಜೆಪಿಗೆ ಅವಸರವಿರುವುದು ಸತ್ಯ. ಆದ್ರೆ, ಮೀಡಿಯಾಗಳಿಗೆ ಇದರ ಅವಶ್ಯಕತೆಯಿಲ್ಲ. ಈ ಮೂರು ಪಕ್ಷಗಳ ನಾಟಕ ನೋಡಿ ನೋಡಿ ರೋಸಿ ಹೋದ ಜನ, ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು ಸಲ್ಲಿಸಬಹುದು. ರಾಜ್ಯದಲ್ಲಿ ಯಾವುದೇ ಕೆಲಸಗಳು ಆಗ್ತಿಲ್ಲ. ಅಧಿವೇಶನದ ಹೆಸರಿನಲ್ಲಿ ತಮ್ಮ ಕುರ್ಚಿಗಾಗಿ ಸಾರ್ವಜನಿಕರ ಕೋಟಿ ಕೋಟಿ ದುಡ್ಡು ಹಾಳು ಮಾಡ್ತಿದ್ದಾರೆ ಎಂದು ಹೇಳಿ ಕೋರ್ಟ್ ಮೆಟ್ಟಿಲು ಹತ್ತಲುಬಹುದು. ಇದಾಗುವ ಮೊದ್ಲೆ ಈ ನಾಟಕಕ್ಕೆ ಆದಷ್ಟು ಬೇಗ ತೆರೆ ಬೀಳಬೇಕಿದೆ ಅನ್ನೋದು ಜನರ ಆಶಯ.