ಪ್ರಜಾಸ್ತ್ರ ಸುದ್ದಿ
ಮೈಸೂರಿನ: ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ನಾಟ್ಯ ಸಂಸ್ಥೆ ನೀಡುವ ಕನ್ನಡ ಕಲಾರತ್ನ ಪ್ರಶಸ್ತಿಗೆ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ನವೆಂಬರ್ 26 ಭಾನುವಾರ ಗೌರವಿಸಲಾಗುತ್ತಿದೆ.
ನಗರದ ರೋಟರಿ ಸಭಾ೦ಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ನಾಟ್ಯ ಸಂಸ್ಥೆಯ ಸಂತೋಷ್ ಕಲಾವಿದ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಲಕ್ಷ್ಮಿರಾಮ್ ಸಾಧನೆ:
ಲಕ್ಷ್ಮಿರಾಮ್ ಅವರು ಮೂಲತಃ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ನಾಡಪ್ಪನಹಳ್ಳಿಯವರು. ಕಳೆದ ಎರಡು ದಶಕಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಗಾಯನ ಕಾರ್ಯಕ್ರಮಗಳನ್ನು ಕರ್ನಾಟಕ ಅಲ್ಲದೆ ಮಹಾ ರಾಷ್ಟ್ರದ ನಾಗಪುರ, ಉತ್ತರಪ್ರದೇಶದ ಕಾಶಿ, ತಿರುಪತಿ, ಛತ್ತಿಸಗಡದ ರಾಯ್ ಪುರ ಹೀಗೆ ದೇಶದ ನಾನಾ ಭಾಗಗಳಲ್ಲಿ ಸಂಗೀತ ಸುಧೆ ಹರಿಸಿದ್ದಾರೆ.
ನಾಡಿನ ಹಲವು ವಿಶ್ವ ವಿದ್ಯಾಲಯಗಳ ವಿವಿಧ ಕಾಲೇಜುಗಳ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಸಾಳೆ, ಜಾನಪದ ಗೀತೆ, ಭಾವ ಗೀತೆ, ದೇಶ ಭಕ್ತಿಗೀತೆಗಳ ತರಬೇತಿ ನೀಡಿದ್ದಾರೆ. ಹಾಗೆಯೇ ಬುದ್ಧ, ಬಸವಣ್ಣ, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು ಕುರಿತ 300 ಕ್ಕೂ ಹೆಚ್ಚಿನ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಪ್ರಶಸ್ತಿ ಮತ್ತು ಗೌರವ:
ಇವರ ಕಲಾಸೇವೆ ಗುರುತಿಸಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ, ಮೈಸೂರು ರತ್ನ ಪ್ರಶಸ್ತಿ, ಕೆನರಾ ಬ್ಯಾಂಕ್ ವಿಶೇಷ ಕಲಾಕಾರ್ ಧಮ್ಮ ಸೇವಾ ರತ್ನ ಪ್ರಶಸ್ತಿ, ಆದಿ ಜನ ರಾಯಬಾರಿ, ಕನ್ನಡ ವಿಕಾಸ ರತ್ನ, ಕರುನಾಡ ಭೂಷಣ, ಕರುನಾಡ ರತ್ನ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ಸಂದಿವೆ.