ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಕಾರಟಗಿ-ಯಶವಂತಪುರ ಟ್ರೇನ್ ಹಳಿ ತಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಗಂಗಾವತಿ ತಾಲೂಕಿನ ಕಾರಟಗಿ ರೈಲು ನಿಲ್ದಾಣದ ಹತ್ತಿರ ಟ್ರೇನ್ ಹಳಿ ತಪ್ಪಿದೆ. ಚಾಲನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ರೈಲಿನಲ್ಲಿ ತಾಂತ್ರಿಕ ಕಾರಣದಿಂದ ಮುಂದಿನ ಚಕ್ರ ಹಳಿ ತಪ್ಪಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಚಾಲಕ ರೈಲಿನ ವೇಗವನ್ನು ಶೂನ್ಯಕ್ಕೆ ತೆಗೆದುಕೊಂಡು ಬಂದು ದೊಡ್ಡ ಅನಾಹುತವೊಂದು ತಪ್ಪಿಸಿದ್ದಾರೆ.
ಎಂಜಿನ್ ಮಾತ್ರ ಹಳಿ ತಪ್ಪಿದ್ದು, ಬೋಗಿಗಳು ಹಳಿ ಮೇಲೆ ಇವೆ. ಹುಬ್ಭಳ್ಳಿ ಮಾರ್ಗವಾಗಿ ಬೆಂಗಳೂರು ತೆರಳಬೇಕಿದ್ದ ರೈಲನ್ನು ರದ್ದುಗೊಳಿಸಲಾಗಿದೆ. ಕಾರಟಗಿ ರೈಲು ನಿಲ್ದಾಣ ಹತ್ತಿರವಾಗಿದ್ದರಿಂದ ವೇಗ ತಗ್ಗಿಸಲಾಗಿತ್ತು. ಹೀಗಾಗಿ ರೈಲು ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ. ಇದರಿಂದಾಗಿ ನೂರಾರು ಜನರ ಜೀವ ಉಳಿದಿದೆ. ರೈಲಿನ ಇಂಜಿನ್ ಮತ್ತೆ ಹಳಿ ಮೇಲೆ ತರಲು ಐದಾರು ಗಂಟೆಯಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.