ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಜೋರಾಗಿದೆ. ಇದರ ಆತಂಕದ ನಡುವೆ 1 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ. ಬೆಳಗಾವಿ ಲೋಕಸಭಾ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7ಗಂಟೆಯಿಂದ ಮತದಾನ ನಡೆಯುತ್ತಿದೆ.
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ದಿನದಿಂದ ತೆರವಾದ ಎಂಪಿ ಸ್ಥಾನಕ್ಕೆ ಬಿಜೆಪಿಯಿಂದ ಅಂಗಡಿ ಪತ್ನಿ ಮಂಗಳಾ ಹಾಗೂ ಕಾಂಗ್ರೆಸ್ ನಿಂದ ಸತೀಶ ಜಾರಕಿಹೊಳಿ ನಡುವೆ ನೇರಾನೇರ ಫೈಟ್ ಇದೆ. ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿಲ್ಲ.
ಇನ್ನು ಬಸವಕಲ್ಯಾಣದ ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣರಾವ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್, ನಾರಾಯಣರಾವ ಪತ್ನಿ ಮಲ್ಲಮ್ಮಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಶರಣು ಸಲಗಾರ ಹಾಗೂ ಜೆಡಿಎಸ್ ನಿಂದ ಸೈಯದ್ ಅಸ್ರಬ್ ಅಲಿ ಖಾದ್ರಿ ಸ್ಪರ್ಧೆ ಮಾಡಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಹಾಗೂ ಕಾಂಗ್ರೆಸ್ ನಿಂದ ಬಸನಗೌಡ ತುರುವಿಹಾಳ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಕಿಲ್ಲ. ಪ್ರತಾಪಗೌಡ ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ರಿಂದ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ.