ಪ್ರಜಾಸ್ತ್ರ ಸುದ್ದಿ
ಅಳ್ನಾವರ: ಅನಾದಿ ಕಾಲದಿಂದಲೂ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಎಲ್ಲ ರಂಗದಲ್ಲೂ ಮಹಿಳೆಯರು ಪುರುಷರ ಸರಿ ಸಮಾನವಾಗಿ ಕಂಡು ಬರುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಅಂಬೇಡ್ಕರ ಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ ಮತ್ತು ಮುಂದುವರಿಯಬೇಕು. ಬದುಕಿಗೆ ಮತ್ತು ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದರು.
ಎರಡನೇ ಬಾರಿಗೆ ತಾಲೂಕು ಕಸಾಪ ಅಧ್ಯಕ್ಷರನ್ನಾಗಿ ಮಾಡಿದಕ್ಕೆ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು ಎಂದು ಡಾ.ಬಿ.ಬಿ ಮೂಡಬಾಗಿಲ ಹೇಳಿದರು.
ಅತಿಥಿ ಸ್ಥಾನ ವಹಿಸಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನದೀಮ್ ಕಾಂಟ್ರಾಕ್ಟರ್ ಮಾತನಾಡಿ, ಅಳ್ನಾವರ ತಾಲೂಕು ಆಗಲು ಡಾ.ಮೂಡಬಾಗಿಲ, ನಮ್ಮ ತಂದೆ ಮುಜಾಹೀದ್ ಕಾಂಟ್ರಾಕ್ಟರ್ ಹಾಗೂ ಇನ್ನುಳಿದ ಹಿರಿಯರ ಪಾತ್ರ ಬಹಳಷ್ಟಿದೆ. ಅಳ್ನಾವರಕ್ಕೆ ಆಸ್ತಿ ಅಂತಾ ಇರುವುದು ನಮ್ಮ ಮೂಡಬಾಗಿಲಯವರು. ಅವರ ಅಧ್ಯಕ್ಷತೆಯಲ್ಲಿ ಕಸಾಪ ಮುಂದುವರೆಯುವುದು ಒಳ್ಳೆಯ ಸಂಗತಿ ಎಂದರು.
ಈ ವೇಳೆ ವಿವಿಧ ರಂಗದಲ್ಲಿ ಅಭೂತಪೂರ್ವ ಸಾಧನೆಗೈದ ಸಾಧಕಿಯರಿಗೆ ಸನ್ಮಾನಿಸಲಾಯಿತು. ಪ.ಪಂ ಅಧ್ಯಕ್ಷೆ ಮಂಗಳಾ ರವಳಪ್ಪನವರ, ಕಸಾಪ ಕಾರ್ಯದರ್ಶಿ ದೀಪಕ ಹಡಗಲಿ, ಅರಣ್ಯ ವಲಯ ಅಧಿಕಾರಿ ಪ್ರಕಾಶ ಕಂಬಾರ ಉಪಸ್ಥಿತರಿದ್ದರು. ಗುರುರಾಜ ಸಬನಿಸ್ ಸ್ವಾಗತಿಸಿದರು. ಪ್ರವೀಣ ಪವಾರ ನಿರೂಪಿಸಿ ವಂದಿಸಿದರು.