ಪ್ರಜಾಸ್ತ್ರ ಸುದ್ದಿ
ಮೈಸೂರು: ಕೋವಿಡ್ 19 ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ 36 ಜನರು ಪ್ರಾಣ ಕಳೆದುಕೊಂಡ ಚಾಮರಾಜನಗರ ಜನರ ಕುಟುಂಬಸ್ಥರ ಜೊತೆಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ನೋವು, ಕಣ್ಣೀರು, ಮಕ್ಕಳ ಅನಾಥ ಪ್ರಜ್ಞೆಯ ನುಡಿಗಳನ್ನು ರಾಹುಲ್ ಗಾಂಧಿಗೆ ಅನುವಾದಿಸುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕುತ್ತಾ ಮಾತನಾಡಿದ್ದರು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯದ ಮಾತುಗಳನ್ನು ಆಡಿದ್ದರು.
ಸಿ.ಟಿ ರವಿ ಮಾತಿಗೆ ತಿರುಗೇಟು ನೀಡಿರುವ ಡಿ.ಕೆ ಶಿವಕುಮಾರ್, ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಮಂತ್ರಿಗಳು ಸಹ ಆ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲಿಲ್ಲ. ನಾನು, ಸಿದ್ದರಾಮಯ್ಯನವರು ಹೋಗಿದ್ದೇವೆ. ಬಿಜೆಪಿಯವರಿಗೆ ಕಣ್ಣು, ಹೃದಯ ಏನೂ ಇಲ್ಲ. ಆ ತಾಯಿ, ಮಕ್ಕಳು ಕಾಣುತ್ತಿದ್ದ ಕನಸು ಏನೆಂದು ನಮಗೆ ಗೊತ್ತಿದೆ. ಅವನ ಮನೆಯಲ್ಲಿ ಇದೆ ಪರಿಸ್ಥಿತಿ ಆಗಿದ್ದರೆ ಎಂದು ವಾಗ್ದಾಳಿ ನಡೆಸಿದ್ದಾರೆ.