ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡಲು ಬಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ, ಹಿರಿಯ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನ ಹಿರಿಯ ವೈದ್ಯ ಮಹೇಶ್ ಬಂಧಿತ ಆರೋಪಿ.
ಈ ಪ್ರಕರಣ ಸಂಬಂಧ ಇನ್ನು ನಾಲ್ಕೈದು ಜನರ ಬಂಧನವಾಗುವ ಸಾಧ್ಯತೆ ಇದೆಯಂತೆ. 24 ವರ್ಷದ ದರ್ಶಿನಿ ಕೋಲಾರದಲ್ಲಿ ಎಂಬಿಬಿಎಸ್ ಮುಗಿಸಿ 7 ತಿಂಗಳ ಹಿಂದೆ ಎಂಡಿ ವ್ಯಾಸಂಗಕ್ಕಾಗಿ ಹೊಸಕೋಟೆಯ ಎಂವಿಜೆ ಕಾಲೇಜಿಗೆ ಬಂದಿದ್ದಳು. ಪ್ರತಿಭಾನ್ವಿತಳಾಗಿದ್ದ ದರ್ಶನಿ ಸರ್ಕಾರಿ ಕೋಟಾದಡಿ ಉಚಿತ ಪ್ರವೇಶ ಪಡೆದಿದ್ದಳು. ಹೀಗಾಗಿ ಆಡಳಿತ ಮಂಡಳಿ ಕಿರುಕುಳ ನೀಡುತ್ತಿತ್ತು ಎಂದು ಸ್ನೇಹಿತನ ಬಳಿ ಹೇಳಿದ್ದಾಳಂತೆ.
ವಿಶ್ರಾಂತಿ ಇಲ್ಲದೆ ದಿನದ 24ಗಂಟೆಯೂ ಕೆಲಸ ಮಾಡಿಸುತ್ತಿದ್ದರಂತೆ. ಇದರ ಜೊತೆಗೆ ಹಿರಿಯ ವೈದ್ಯರೊಬ್ಬರು ಕಿರುಕುಳ ನೀಡುತ್ತಿದ್ದರು ಎಂದು ಹೇಳಿಕೊಂಡಿದ್ದಾಳಂತೆ. ಇದಾದ ಬಳಿಕ ಕಳೆದ ಭಾನುವಾರ ಕೋಲಾರ ತಾಲೂಕಿನ ಕೆಂದಟ್ಟಿ ಹತ್ತಿರದ ಕಲ್ಲು ಕ್ವಾರಿಯಲ್ಲಿದ್ದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನ ಬಂಧನವಾಗಿದೆ. ಉಳಿದವರ ಶೋಧ ಕಾರ್ಯ ನಡೆದಿದೆ.