ಮಂಡ್ಯ: ಪಾಂಡವಪುರ ಪಟ್ಟಣದಲ್ಲಿ ಕರೋನಾ ಹರಡದಂತೆ ತಡೆಗಟ್ಟುವ ಸಂಬಂಧ ಶಾಸಕ ಸಿ.ಎಸ್.ಪುಟ್ಟರಾಜು ಚಿನಕುರಳಿ ಹೋಬಳಿ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಪಿಡಿಓಗಳ ಸಭೆ ನಡೆಸಿದರು.
ತಾಲೂಕಿನ ಚಿನಕುರಳಿ ಗ್ರಾಮದ ಪ್ರವಾಸಿಮಂದಿರದಲ್ಲಿ ಗ್ರಾಪಂ ಪಿಡಿಓ, ಕಂದಾಯ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಭೆ ನಡೆಸಿ, ಪ್ರತಿಯೊಬ್ಬ ಅಧಿಕಾರಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಪ್ರತಿ ಗ್ರಾಪಂ ಪಿಡಿಓಗಳು ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಚತೆ ಮಾಡಬೇಕು, ಔಷಧ ಸಿಂಪಡಿಸಬೇಕು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಕ್ಷೇತ್ರದ ಜನತೆಗೆ ಕರೋನಾ ಹರಡದಂತೆ ತಡೆಗಟ್ಟಲು ವೈಯುಕ್ತಿಕವಾಗಿ ಸುಮಾರು 40 ಸಾವಿರಕ್ಕೂ ಅಧಿಕ ಮಾಸ್ಕ್ ಗಳನ್ನ ಗ್ರಾಮ ಪಂಚಾಯ್ತಿ ಮೂಲಕ ವಿತರಿಸಲು ನಿರ್ಧರಿಸಿದ್ದೇನೆ ಎಂದರು.
ಇನ್ನು ಕಂದಾಯ ಇಲಾಖೆ ಮತ್ತು ಪಿಡಿಓಗಳು ಜತೆಗೆಯಾಗಿ ರೈತರ ರಕ್ಷಣೆಗೆ ಮುಂದಾಗಬೇಕು. ತರಕಾರಿ ಬೆಳೆದು ಮಾರಾಟಮಾಡಲು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗಿ, ಅವರಿಗೆ ಸೂಕ್ತವಾದ ಮಾರುಕಟ್ಟೆ ನಿರ್ಮಿಸಿಕೊಟ್ಟು ತರಕಾರಿ ಮಾರಾಟ ಮಾಡುವುದಕ್ಕೆ ಕ್ರಮವಹಿಸಬೇಕು ಎಂದು ಸೂಚಿಸಿದರು..
ಆರೋಗ್ಯ ಇಲಾಖೆಯ ಅಧಿಕಾರಿಗಳ ಪಾತ್ರ ಹೆಚ್ಚಾಗಿದೆ. ಜವಬ್ದಾರಿಯಿಂದ ಕೆಲಸ ಮಾಡಬೇಕು, ಯಾರೇ ಬಂದರು ಸ್ಪಂದಿಸಿ ಕೆಲಸ ಮಾಡಿ, ರೋಗ ಪತ್ತೆಹಚ್ಚುವ ಕೆಲಸ ಮಾಡಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸಬೇಡಿ ಎಂದು ಸೂಚಿಸಿದರು. ಸಭೆಯಲ್ಲಿ ಜಿಪಂ ಸದಸ್ಯ ಸಿ.ಅಶೋಕ, ತಾಪಂ ಇಓ ಆರ್.ಪಿ.ಮಹೇಶ, ಎಎಸ್ಐ ಸುಗಂದರಾಜ, ವೈದ್ಯಾಧಿಕಾರಿ ಚಂದ್ರಿಕಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪಿಡಿಓಗಳು ಹಾಜರಿದ್ದರು.