ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣಾ ಮತದಾನ ವೇಳೆ ಕಾರವಾರ ರಸ್ತೆಯ ಬಾಸೆಲ್ ಮಿಶನ್ ಸ್ಕೂಲನಲ್ಲಿರುವ ಮತಗಟ್ಟೆ ಸಂಖ್ಯೆ 26ರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಮತದಾನ ಸಂದರ್ಭದಲ್ಲಿ ಕ್ರಮವಾಗಿ ಮತ ಚಲಾಯಿಸುವಂತೆ ಮತಗಟ್ಟೆ ಅಧಿಕಾರಿ ಶಶಿಕಾಂತ ಮಂಟೂರ ಹಾಗೂ ಕೆಲ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಹೇಳಿ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದರು. ಮತ ಪತ್ರದ ಕ್ರಮ ಸಂಖ್ಯೆ 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ, ಕ್ರಮ ಸಂಖ್ಯೆ 2ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಹೆಸರಿದೆ.
ಘಟನೆ ನಂತರ ಬಿಜೆಪಿಯ ಶಿಬಾ ಪ್ರತಾಪನ್, ಆರ್.ಎಂ ವರಕೋಟಿ ಹಾಗೂ ಸುನೀಲ ನಾಜರೆ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದರು. ಈ ಆರೋಪದಿಂದಾಗಿ ಚುನಾವಣಾ ಆಯೋಗ, ಶಶಿಕಾಂತ ಮಂಟೂರ ಅವರನ್ನು ಬದಲಾವಣೆಗೊಳಿಸಿ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸುವುದರೊಂದಿಗೆ ಗೊಂದಲಕ್ಕೆ ತೆರೆ ಎಳೆಯಿತು.