ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಊರುಗಳಲ್ಲಿ ಲೋಡ್ ಶೆಡ್ಡಿಂಗ್ ಬಿಸಿಯನ್ನು ಜನರು ಎದುರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ವಿದ್ಯುತ್ ಬೇಡಿಕೆ ಹೆಚ್ಚಿದೆ. ಪೂರೈಕೆ ಕಡಿಮೆಯಾಗಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ 12 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈಗ 15 ಸಾವಿರ ಆಗಿದೆ. 1500-2000 ಮೆಗಾವ್ಯಾಟ್ ತನಕ ಉತ್ಪಾದನೆ ಕೊರತೆ ಇದೆ. ಉಚಿತ ವಿದ್ಯುತ್ ಗ್ಯಾರೆಂಟಿಯಿಂದ ಖುಷಿಯಾಗಿದ್ದ ಜನತೆಗೆ ಈಗ ಲೋಡ್ ಶೆಡ್ಡಿಂಗ್ ತಲೆ ನೋವು ತಂದಿದೆ.
ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂ, ಮೆಸ್ಕಾಂನಿಂದಲೂ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ. ಜೊತೆಗೆ ಪಡಿತರ ವ್ಯವಸ್ಥೆ ಮೂಲಕ ವಿದ್ಯುತ್ ಪೂರೈಕೆ ಮಾಡಲು ಚಿಂತನೆ ನಡೆಸಿದೆ. ಹೀಗಾಗಿ ಗ್ರಾಹಕರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ಇನ್ನು ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಿಸಲಾಗಿರುವ ಸೋಲಾರ್ ಪಾರ್ಕ್ ನಲ್ಲಿಯೂ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುಸಿದಿದೆ. ಪವನಶಕ್ತಿಯಿಂದ ಬರುತ್ತಿದ್ದ ವಿದ್ಯುತ್ ನಲ್ಲಿ ತೀವ್ರ ಕುಸಿತವಾಗಿದ್ದು 2000 ದಿಂದ 400 ಮೆಗಾವ್ಯಾಟ್ ಗೆ ಇಳಿದಿದೆ. ಹೀಗೆ ಯಾವ ಯಾವ ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆಯೋ ಅಲೆಲ್ಲ ಕುಸಿತ ಕಂಡಿದೆ. ಹೀಗಾಗಿ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ಲೋಡ್ ಶೆಡ್ಡಿಂಗ್ ನಿಂದ ಪರಿತಾಪಿಸುತ್ತಿದ್ದಾರೆ.