ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ನಿಂತುಕೊಳ್ಳುತ್ತೇನೆ. ಪ್ರಚಾರ ಮಾಡುತ್ತೇನೆ ಎಂದು ಹೇಳಿರುವ ನಟ ಸುದೀಪ್ ಅವರ ಸಿನಿಮಾ, ಕಾರ್ಯಕ್ರಮ, ಜಾಹೀರಾತುಗಳನ್ನು ನಿರ್ಬಂಧಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸುದೀಪ್ ಸಿನಿಮಾ, ಜಾಹೀರಾತು ತಡೆಹಿಡಿಯಲು ಚುನಾವಣಾ ಆಯೋಗಕ್ಕೆ ವಕೀಲರೊಬ್ಬರು ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗದ ವಕೀಲ ಕೆ.ಪಿ ಶ್ರೀಪಾಲ್ ಎಂಬುವರು ಚುನಾವಣಾ ಆಯೋಗಕ್ಕೆ ಮೇಲ್ ಮಾಡಿದ್ದಾರೆ. ನಟರೊಬ್ಬರು ಒಂದು ಪಕ್ಷದ ಪರ ಪ್ರಚಾರ ಮಾಡುತ್ತಿದ್ದರೆ ಅವರ ಸಿನಿಮಾ, ಕಾರ್ಯಕ್ರಮ, ಜಾಹೀರಾತುಗಳು ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಮುಗಿಯುವ ತನಕ ಇವುಗಳಿಗೆ ನಿರ್ಬಂಧ ಹೇರಬೇಕು ಎಂದು ಕೇಳಿಕೊಂಡಿದ್ದಾರೆ.
ಬುಧವಾರ ಸಂಜೆ ಸಿಎಂ ಬೊಮ್ಮಾಯಿ, ನಟ ಸುದೀಪ್ ಹಾಗೂ ಕೆಲ ಸಚಿವರು ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ನಟ ಸುದೀಪ್, ಕಷ್ಟಕಾಲದಲ್ಲಿ ಬೊಮ್ಮಾಯಿ ಮಾಮ ನನ್ನ ಪರ ನಿಂತಿದ್ದಾರೆ. ಇವತ್ತು ನಾನು ಅವರ ಪರ ನಿಂತುಕೊಳ್ಳುತ್ತಿದ್ದೇನೆ. ನಾನು ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿದರು. ಇದು ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.