ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಹಲವು ಕಾರಣಕ್ಕೆ ವಿವಾದದ ಕಿಡಿ ಹೊತ್ತಿಸಿದೆ. ಮಕ್ಕಳ ತಲೆಗೆ ಕೋಮುವಾದ ತುಂಬುವ ಕೆಲಸ ನಡೆದಿದೆ ಎಂದು ಹಲವು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಲವರು ತಮ್ಮಗೆ ನೀಡಿದ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ತಮ್ಮ ಪಠ್ಯಗಳಿಗೆ ನೀಡಿದ ಅನುಮತಿ ವಾಪಸ್ ಪಡೆದರು.
ಇದರ ಜೊತೆಗೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ ವ್ಯಕ್ತಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನಾಗಿದ್ದು, ಪಕ್ಷ ಪುಸ್ತಕ ಮಾಡುವ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಒಕ್ಕಲಿಗರ ಸಮಾಜ, ಸ್ವಾಮೀಜಿಗಳು ಸಿಎಂಗೆ ಪತ್ರ ಬರೆದಿದ್ದಾರೆ.
ಇದೀಗ ಬಸವಣ್ಣನವರ ಕುರಿತು 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಸಾಣೇಹಳ್ಳಿಯ ತರಳಬಾಳು ಪಂಡಿತರಾದ್ಯ ಶಿವಾಚಾರ್ಯರು ಸಿಎಂಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷದ ಅನೇಕ ಮಹತ್ವದ ಅಂಶಗಳನ್ನು ತೆಗೆದು ಹಾಕಲಾಗಿದೆ. ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಅನ್ನೋದು ಶುದ್ಧ ಸುಳ್ಳು. ಈ ಮೂಲಕ ಬಸವಣ್ಣನವರು ಹಾಗೂ ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಪಠ್ಯಪುಸ್ತಕ ತಡೆಹಿಡಿದು ದೋಷ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.