ಕೊಲ್ಕತ್ತಾ: ಪಶ್ಚಿಮ ಬಂಗಳಾದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ಕೊಲೆಯ ಪ್ರಮುಖ ಆರೋಪಿ ಅರೆಸ್ಟ್ ಆಗಿದ್ದಾನೆ. ಮೇಸ್ತ್ರಿ ಕೆಲಸ ಮಾಡುವ ಉತ್ಪಲ್ ಬೆಹ್ರಾ ಎಂಬಾತನನ್ನ ಪೊಲೀಸ್ರು ಇಂದು ಬಂಧಿಸಿದ್ದಾರೆ.
ಪ್ರಮುಖ ಆರೋಪಿಯನ್ನ ಸಹಾಪುರ ಪ್ರದೇಶದ ಸಾಗರದಿಘಿಯಲ್ಲಿ ಅರೆಸ್ಟ್ ಮಾಡಲಾಗಿದೆ ಅಂತಾ ಮುರ್ಶಿದಾಬಾದ್ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 8ರಂದು ದುರ್ಗಾ ಪೂಜೆ ಟೈಂನಲ್ಲಿ ಶಿಕ್ಷಕ ಪ್ರಕಾಶ ಪಾಲ್, ಗರ್ಭಿಣಿ ಪತ್ನಿ ಬ್ಯೂಟಿ ಹಾಗೂ 8 ವರ್ಷದ ಮಗ ಅಂಗನ್ ನನ್ನ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.
ಶಿಕ್ಷಕ ಪ್ರಕಾಶ ಪಾಲ್, ಎಲ್ಐಸಿ ಅಜೆಂಟ್ ಆಗಿ ಸಹ ಕೆಲಸ ಮಾಡ್ತಿದ್ದ. ಉತ್ಪಲ್ ಬೆಹ್ರಾ ಹಾಗೂ ಪ್ರಕಾಶ ನಡುವೆ ಪಾಲಸಿ ಕಾರಣಕ್ಕೆ ಜಗಳ ಸಹ ನಡೆದಿತ್ತು. ಅಲ್ದೇ, ಪಾಲ್ ಬೆಹ್ರಾಗೆ ಅವಮಾನಿಸಿದ್ದನಂತೆ. ಹೀಗಾಗಿ ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಮೊದಲು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ಕೊಲೆಯಾದ ಪ್ರಕಾಶ ಪಾಲ್ ಆರ್ ಎಸ್ಎಸ್ ಸದಸ್ಯನಾಗಿದ್ದ ಅಂತಾ ಹೇಳಲಾಗ್ತಿದೆ. ಆರ್ ಎಸ್ಎಸ್ ಹಾಗೂ ಬಿಜೆಪಿ ಸಹ ಈ ಬಗ್ಗೆ ಹೇಳಿಕೆ ನೀಡಿದ್ದು, ಸಕ್ರಿಯ ಕಾರ್ಯಕರ್ತನಲ್ಲದಿದ್ರೂ, ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಂತಾ ಹೇಳಿದ್ರು.