ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಜೊತೆಗೆ ಮಹಿಳೆಯೊಬ್ಬರ ಅಪಹರಣ ಸಂಬಂಧ ಜೆಡಿಎಸ್ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಇವರ ವಿರುದ್ಧದ ಎಫ್ಐಆರ್ ನಲ್ಲಿ 1 ಆರೋಪಿಯಾಗಿದ್ದಾರೆ. ಎ2 ಆರೋಪಿ ಸತೀಶ್ ಬಾಬಣ್ಣ, ರೇವಣ್ಣ ಪತ್ನಿ ಭವಾನಿ ಸಂಬಂಧಿಕನಂತೆ.
ಮಹಿಳೆ ಅಪಹರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಹೆಚ್.ಡಿ ರೇವಣ್ಣ ಹೋಮ, ಹವನ ಮಾಡಿಕೊಂಡು ಇದ್ದಾರೆ. ಆದರೆ, ಪೊಲೀಸರು ಎ2 ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಕಳಿಸಿದ್ದಾರೆ. ಇದು ಹಲವು ಅನುಮಾನಗಳನ್ನು ಮೂಡಿಸಿದೆ.
ಎ1 ಆರೋಪಿ ರೇವಣ್ಣನ ಬಂಧನಕ್ಕೆ ಏನು ಅಡ್ಡಿಯಾಗುತ್ತಿದೆ? ರಾಜ್ಯ ಸರ್ಕಾರ ಪೊಲೀಸರಿಗೆ, ಎಸ್ಐಟಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ ಎಂದು ಹೇಳುತ್ತಲೇ ಅವರ ಕೈ ಕಟ್ಟಿ ಹಾಕುವ ಕೆಲಸ ಮಾಡ್ತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ರೇವಣ್ಣ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಸಹ ಇರುತ್ತೆ. ಹೀಗಿರುವಾಗ ಅವರನ್ನು ಬಂಧಿಸಿದೆ ಬಿಟ್ಟಿರುವುದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.