ಹುಬ್ಬಳ್ಳಿ/ಸಿಂದಗಿ: ಹುಬ್ಬಳ್ಳಿಯ ಸ್ಮಾರ್ಟ್ ಫುಡ್ ಇಂಡಿಯಾ ಪ್ರೈ.ಲಿ ಹೆಸರಿನ ಸಂಸ್ಥೆ ಆರ್.ಡಿ, ಎಫ್.ಡಿ, ಪಿಗ್ಮಿ ಹಾಗೂ ಷೇರು ಕಟ್ಟಿಸಿಕೊಂಡು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಬರೋಬ್ಬರಿ 4.5 ಕೋಟಿ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಿಂದಗಿ ತಾಲೂಕಿನ 10ಕ್ಕೂ ಹೆಚ್ಚು ಏಜೆಂಟರ್ ಮೂಲಕ 450ಕ್ಕೂ ಹೆಚ್ಚು ಗ್ರಾಹಕರು ಈ ಸಂಸ್ಥೆಯ ಮೂಲಕ 4.5 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಹಣ ವಾಪಸ್ ನೀಡದಿರುವ ಕಾರಣ, ಗ್ರಾಹಕರು ಏಜೆಂಟ್ ಅವರನ್ನ ಪೀಡಿಸಲು ಶುರು ಮಾಡಿದ್ದಾರೆ. ಇದರಿಂದ ಬೇಸತ್ತು ಕಳೆದ 2 ವರ್ಷಗಳಿಂದ ಊರು ಊರು ಅಲೆದಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಏಜೆಂಟ್ ಬಸವರಾಜ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಹುಬ್ಬಳ್ಳಿಯ ಕೇಶ್ವಾಪುರದ ದಿವಾಕರ ದ್ಯಾವ್ಯಾನಾಯಕ ಹಾಗೂ ಮಾರುತಿ ಹಡಗಲಿ ಎಂಬುವವರು 2013ರಲ್ಲಿ, ದೇಶಪಾಂಡೆ ನಗರದಲ್ಲಿ ಕಂಪನಿ ಶುರು ಮಾಡಿದ್ದಾರೆ. ಮುಂದೆ ಮಂಡ್ಯ, ಸಿದ್ದಾಪುರ, ಶಿರಸಿ ಹಾಗೂ ಸಿಂದಗಿಯಲ್ಲಿ ಶಾಖೆಗಳನ್ನು ಓಪನ್ ಮಾಡಿದ್ರು.
ತಮ್ಮ ಕಂಪನಿಯಲ್ಲಿ 6 ವರ್ಷ ಹಣ ಠೇವಣಿ ಮಾಡಿದ್ರೆ ಡಬಲ್ ಮಾಡಿಕೊಡುವುದಾಗಿ, ಇದರ ಜೊತೆಗೆ ತಿಂಗಳಲ್ಲಿ 25 ದಿನ 100 ರೂಪಾಯಿಯಂತೆ 18 ತಿಂಗಳು ಕಟ್ಟಿದ್ರೆ 50 ಸಾವಿರ ರೂಪಾಯಿ ನೀಡುವುದಾಗಿ ಗ್ರಾಹಕರಿಗೆ ನಂಬಿಸಿದ್ರು. 2 ವರ್ಷ ಚೆನ್ನಾಗಿ ಕೆಲಸ ಮಾಡಿದ ಸಂಸ್ಥೆ, 2016 ಬಳಿಕ ಗ್ರಾಹಕರಿಗೆ ಹಣ ನೀಡಲು ದಿವಾಕರ ಮತ್ತು ಮಾರುತಿ ಹಿಂದೇಟು ಹಾಕಲು ಶುರು ಮಾಡಿದ್ರು.
ಬಳಿಕ ಕೋರ್ಟ್ ಅಫಿಡೆವಿಟ್ ಮಾಡಿಸಿ ಕೆಲ ದಿನಗಳವರೆಗೆ ಗ್ರಾಹಕರಿಗೆ ಸಮಾಧಾನ ಪಡಿಸಿದ್ರು. ಬಳಿಕ ಚೆಕ್ ಗಳನ್ನ ನೀಡಿದ್ರು. ಅದು ಬೌನ್ಸ್ ಆಗಿದ್ವು. ಗ್ರಾಹಕರು ತಮ್ಮ ಹಣವನ್ನ ಏಜೆಂಟರ ಬಳಿ ಕೇಳಲು ಬೆನ್ನು ಬಿದ್ದಿದ್ದಾರೆ. ಇದ್ರಿಂದ ಬೇಸತ್ತ ಏಜೆಂಟರು ದಿವಾಕರ ಮತ್ತು ಮಾರುತಿ ವಿರುದ್ಧ 2017ರಲ್ಲಿ ಉಪನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಇಬ್ಬರನ್ನ ಕರೆ ತಂದು ವಿಚಾರಣೆ ನಡೆಸಲಾಗಿತ್ತು. ಬಳಿಕ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರ ಬಂದಿದ್ರು.