ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ತಿಳಿಸಿದೆ.
ಕಲಬುರಗಿ, ಬೀದರ, ರಾಯಚೂರು, ವಿಜಯಪುರ, ಗದಗ, ಧಾರವಾಡ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಇಂದಿನಿಂದ ಭರ್ಜರಿ ಮಳೆಯಾಗಲಿದೆ. ಕರಾವಳಿಯಲ್ಲಿ ಸೆಪ್ಟೆಂಬರ್ 26, 27ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಾವಣಗೆರೆ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದ ಕೆಲವು ಕಡೆ ಸಾಧಾರಣ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ತುಮಕೂರು, ಕೋಲಾರ, ರಾಮನಗರದಲ್ಲಿಯೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಜಯಪುರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ಮಳೆ ಶುರುವಾಗಿದೆ. ಸಿಂದಗಿ ಪಟ್ಟಣದಲ್ಲಿಯೇ ಮಧ್ಯರಾತ್ರಿಯಿಂದ ಬೆಳಗಿನಜಾವದವರೆಗೂ ಭರ್ಜರಿ ಮಳೆಯಾಗಿದೆ.
ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಾಗಳನ್ನ ಅನುಸರಿಸುವುದು ಒಳ್ಳೆಯದು. ನೌಕರಸ್ಥರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಾಹನ ಸವಾರರು, ಸಣ್ಣಪುಟ್ಟ ವ್ಯಾಪಾರಸ್ಥರು ಸೇರಿದಂತೆ ಪ್ರತಿಯೊಬ್ಬರು ತಗ್ಗು ಪ್ರದೇಶ, ವಿದ್ಯುತ್ ಕಂಬ, ತಂತಿ ಸೇರಿದಂತೆ ಕೆಲ ಸೂಕ್ಷ್ಮಗಳ ಬಗ್ಗೆ ಗಮನ ಹರಿಸಬೇಕು.