ಪ್ರಜಾಸ್ತ್ರ ಸುದ್ದಿ
ತುಮಕೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಸಾವರ್ಕರ್ ಫ್ಲೆಕ್ಸ್ ಗಲಾಟೆ ಒಂದು ಕಡೆಯಾದರೆ, ತುಮಕೂರಿನಲ್ಲಿ ಗೋಡ್ಸೆ ಫೋಟೋ ಹಾಕಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಲಾಗಿದೆ.
ಮಧುಗಿರಿಯ ಡಿ.ಎಂ ಬಡಾವಣೆಯಲ್ಲಿ ಭಗತ್ ಸಿಂಗ್ ಯೂಥ್ ಅಸೋಷಿಯೇಷನ್ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಆದರೆ, ಅಸಲಿಗೆ ಈ ಸಂಘಟನೆ ಇಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಬ್ಯಾನರ್ ಮೊದಲ ಸಾಲಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಶೇಖರ್ ಆಝಾದ್, ಸುಭಾಷ್ ಚಂದ್ರ ಬೋಸ್ ಜೊತೆಗೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಫೋಟೋ ಇದೆ. ಕೆಳಗಡೆ ಲಾಲ್ ಬಹದ್ದೂರ್ ಶಾಸ್ತ್ರಿ, ಗಾಂಧಿ, ಸರ್ದಾರ್ ಪಟೇಲ್ ಸೇರಿ ಇತರರ ಫೋಟೋ ಹಾಕಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.