ಸಿಂದಗಿ: ಪಟ್ಟಣದ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ ನಾಲ್ಕು ದಿನಗಳಾಗಿವೆ. ಇಂದು ಇಬ್ಬರು ನಾಮಪತ್ರ ಸಲ್ಲಿಸುವ ಮೂಲಕ ವಾರ್ಡ್ ವಾರ್ ಗೆ ಎಂಟ್ರಿ ಕೊಟ್ಟಿರುವುದು ಪಕ್ಕಾ ಆಗಿದೆ. 7ನೇ ವಾರ್ಡ್ ನಿಂದ ಪುರಸಭೆ ಮಾಜಿ ಅಧ್ಯಕ್ಷ ಬಾಷಾಸಾಬ ತಾಂಬೋಳಿ ಹಾಗೂ 16ನೇ ವಾರ್ಡ್ ನಿಂದ ಭೀಮ ಕಲಾಲ ಅನ್ನೋರು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬಾವುಟದೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ 7ನೇ ವಾರ್ಡ್ ಅಭ್ಯರ್ಥಿ ಭಾಷಾಸಾಬ ತಾಂಬೋಳಿ ನಾಮಪತ್ರ ಸಲ್ಲಿಸಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ಉತ್ಸಾಹದಲ್ಲಿ ಉಮೇದುವಾರಿಕೆ ಸಲ್ಲಿಕೆ ವೇಳೆ ಒಂದಿಷ್ಟು ನೀತಿ ಸಂಹಿತೆ ಉಲ್ಲಂಘಿಸಲಾಗಿದೆ.
ನಾಮಪತ್ರ ಸಲ್ಲಿಸುವಾಗ ಮಕ್ಕಳನ್ನ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಇದು ಬಾಲ ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದೆ. ಉಮೇದುವಾರಿಕೆ ಸಲ್ಲಿಸುವಾಗ 5 ಜನ ಹೊರತು ಪಡಿಸಿ ಕಾರ್ಯಕರ್ತರು ಕಚೇರಿಯಿಂದ ಸುಮಾರು 500 ಮೀಟರ್ ದೂರವಿರಬೇಕು ಮತ್ತು ಘೋಷಣೆ ಕೂಗಬಾರದು. ಆದ್ರೆ, ಈ ಎರಡರ ಉಲ್ಲಂಘನೆಯಾಗಿದೆ.
ಇದರ ಜೊತೆಗೆ ತಹಶೀಲ್ದಾರ್ ಕಚೇರಿಯ ಒಳಗೆಯೇ ನೀರಿನ ಬಾಟಲ್ ಗಳನ್ನ ತಂದು ಹಂಚಲಾಗಿದೆ. ನೀರು ಕುಡಿದ ಕಾರ್ಯಕರ್ತರು ಬಾಟಲ್ ಗಳನ್ನ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ತುಂಬಾ ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ. ಹೀಗಿದ್ರೂ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸೈಲೆಂಟ್ ಆಗಿರುವುದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ ಅಂತಾ ಸಾರ್ವಜನಿಕರು ಮಾತ್ನಾಡಿಕೊಳ್ತಿದ್ದಾರೆ.