ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ 23 ವಾರ್ಡ್ ಗಳಲ್ಲಿ ಬಹುತೇಕ ಕಡೆ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ವಾರ್ಡ್ ನಂಬರ್ 6ರ ಶಂಕರ ಬಡಾವಣೆಯಲ್ಲಿ, ಉದ್ಯಾನವನ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆಗೆ ಬಂದ ಶಾಸಕ ರಮೇಶ ಭೂಸನೂರ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸೇರಿ ಸದಸ್ಯರ ವಿರುದ್ಧ ಅಲ್ಲಿನ ಜನರು ಅಸಮಾದಾನ ಹೊರ ಹಾಕಿದ್ದರು. ಯಾಕಂದರೆ, ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲವೆಂದು. ಆದರೆ, ಪುರಸಭೆ ಕಾರ್ಯಾಲಯದ ಎದುರೆ ಕುಡಿಯುವ ನೀರು ಪೋಲಾಗಿ ಹೋಗುತ್ತಿದೆ.
ಪುರಸಭೆ ಕಚೇರಿ ಮುಂಭಾಗದಲ್ಲಿ ಬೃಹತ್ ಚರಂಡಿ ಇದೆ. ಅದರ ಹತ್ತಿರ ಹಾಯ್ದು ಹೋಗಿರುವ ನೀರಿನ ಸಂಪರ್ಕದ ಪೈಪ್ ಒಡೆದು ಹೋಗಿದ್ದು, ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ನೀರು ಹರಿಯುವ ವೇಗಕ್ಕೆ ಅಲ್ಲೇ ಪಕ್ಕದಲ್ಲಿ ಕುಳಿತು ತರಕಾರಿ ವ್ಯಾಪಾರ ಮಾಡುತ್ತಿದ್ದವರು ಸಹ ತೊಂದರೆ ಅನುಭವಿಸಿದ್ದಾರೆ. ಕೂಡಲೇ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರು ಇದನ್ನು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.