ಪ್ರಜಾಸ್ತ್ರ ಸುದ್ದಿ
ಸಿಂದಗಿ: ನಮ್ಮ ಗಾಣಿಗ ಸಮಾಜದ ಜನರು ಕಳೆದ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಪರ ಕೆಲಸ ಮಾಡಿತು. ಅವರನ್ನು ಸೋಲದ ಹಾಗೇ ನೋಡಿಕೊಂಡರೂ ನಮ್ಮ ಸಮಾಜದ ನಾಯಕರನ್ನು ಮೂಲೆಗುಂಪು ಮಾಡಿದರು ಎಂದು ಸಮಾಜದ ಮುಖಂಡ ಸುರೇಶ ಮಳಲಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕೋಡಿಯಲ್ಲಿ ಮೂರು ಬಾರಿ ಜಿಗಜಿಣಗಿ ಗೆಲ್ಲಲು ಲಕ್ಷ್ಮಣ ಸವದಿ ಅವರು ಸಹಾಯ ಮಾಡಿದರೂ ಅವರಿಗೆ ಟಿಕೆಟ್ ಕೈ ತಪ್ಪಿದಾಗ ವಿಷಾದ ವ್ಯಕ್ತಪಡಿಸಲಿಲ್ಲ. ಕಾಂಗ್ರೆಸ್ ನಲ್ಲಿ ಅವರಿಗೆ ಉನ್ನತ ಸ್ಥಾನ ಸಿಗಲಿದೆ. ಗಾಣಿಗ ಸಮಾಜಕ್ಕೆ 2ಎ ಸಿಗಲು ಮೊಯ್ಲಿ ಸರ್ಕಾರ ಹಾಗೂ ಸಿದ್ದು ನ್ಯಾಮನಗೌಡರು ಕಾರಣ. ಇಂಡಿಯಲ್ಲಿ ನಮ್ಮ ಸಮುದಾಯ ಭವನಕ್ಕೆ ಅಲ್ಲಿಯ ಶಾಸಕರು 5 ಕೋಟಿ ಅನುದಾನ ನೀಡಿದ್ದಾರೆ. ಸಿಂದಗಿಯಲ್ಲಿ ವನಶ್ರೀಗೆ ಇಲ್ಲಿಯ ಶಾಸಕರು 2 ಕೋಟಿ ನೀಡಿದ್ದಾರೆ. ಹೀಗಾಗಿ ನಮ್ಮ ಸಮಾಜದವರು ಕಾಂಗ್ರೆಸ್ಸಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ನಮ್ಮ ಸಮಾಜದ ನಾಯಕರನ್ನು ಬೆಳಸಲು ರಮೇಶ ಜಿಗಜಿಣಗಿ ಅವರಿಗೆ ಅವಕಾಶವಿತ್ತು. ಆದರೆ, ಯಡವಿದರು. ಜಿಲ್ಲೆಯ ಅಭಿವೃದ್ಧಿಗೆ ಇವರ ಕೊಡುಗೆ ಶೂನ್ಯ ಎಂದು ಗೊಲ್ಲಾಳಪ್ಪಗೌಡ ಪಾಟೀಲ ಹೇಳಿದರು. ನಮ್ಮ ಸಮಾಜಕ್ಕೆ ಒಂದೇ ಒಂದು ಅನುದಾನ ನೀಡಿಲ್ಲ. ಈ ಬಾರಿಗೆ ಅವರಿಗೆ ಬೆಂಬಲ ನೀಡುವುದಿಲ್ಲವೆಂದು ಸುರೇಶ ಚೌಧರಿ ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗಿರೀಶಗೌಡ ಪಾಟೀಲ ಯರಗಲ್ಲ, ಪ್ರವೀಣ ಕಂಠಿಗೊಂಡ, ರಾವುತಗೌಡ ಬಿರಾದಾರ ಸೇರಿ ಇತರರು ಉಪಸ್ಥಿತರಿದ್ದರು.