ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸಮಯಕ್ಕೆ ಸರಿಯಾಗಿ ಸಂಬಳ ಸಿಗದೆ ಇರುವುದು ಹಾಗೂ ಪೌರ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ನೀಡುವ ಬೋನಸ್ ನೀಡದೆ ಇರುವ ಕಾರಣಕ್ಕೆ ಶುಕ್ರವಾರ ರಾತ್ರಿ, ಕೆಲ ಪೌರ ಕಾರ್ಮಿಕರು ಮುಖ್ಯಾಧಿಕಾರಿ ಪ್ರಕಾಶ ಮುದಗೋಳಕರ ಅವರನ್ನು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಕಚೇರಿ ಸಮಯ ಮುಗಿದರೂ, ಕಚೇರಿಯಲ್ಲಿದ್ದ ಮುಖ್ಯಾಧಿಕಾರಿ ಕೆಲವು ಬಿಲ್ಲುಗಳನ್ನು ತೆಗೆಯುತ್ತಿರುವುದಾಗಿ ಆರೋಪಿಸಿದ ಕೆಲವು ಪೌರ ಕಾರ್ಮಿಕ ಸಿಬ್ಬಂದಿ, ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಇರುವುದರಿಂದ ನೆಮ್ಮದಿ ಹಾಳಾಗಿದ್ದು, ಪ್ರತಿ ದಿನ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕಳೆದ ನಾಲ್ಕು ತಿಂಗಳಿನ ವೇತನದಲ್ಲಿ ಒಂದರೆಡು ತಿಂಗಳಿನ ವೇತನವನ್ನಾದರೂ ತೆಗೆದುಕೊಡುವಂತೆ ಮುಖ್ಯಾಧಿಕಾರಿಗೆ ಒತ್ತಾಯಿಸಿದ್ದಲ್ಲದೇ, ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಪೌರ ಕಾರ್ಮಿಕ ದಿನಾಚರಣೆಯ ವಿಶೇಷ ಭತ್ಯೆ ಹಣ ಏಳು ಸಾವಿರವನ್ನಾದರೂ ಕೊಡಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಪೌರ ಕಾರ್ಮಿಕರು ತಮ್ಮ ನೋವನ್ನು ಹೇಳಲು ಮುಂದಾದರೆ ಅವರನ್ನು ಅಮಾನತ್ತು ಮಾಡಿ ಇಲ್ಲ ಬೇರೆ ಕಡೆಗೆ ಎತ್ತಂಗಡಿ ಮಾಡಿ ಎನ್ನುವ ಸಣ್ಣ ನೌಕರನೊಬ್ಬನ ಮಾತು ಕೇಳುವ ಅಧಿಕಾರಿಗಳು ಹಾಗೂ ಆಡಳಿತ ಮುಖ್ಯಸ್ಥರು ಸರ್ವಾಧಿಕಾರಿಯಂತಾಗಿ ನೌಕರರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಕಚೇರಿಯಲ್ಲಿ ಕೆಲಸ ಮಾಡುವ ವಾಟರ್ ಸಪ್ಲೇ, ಲೋರ್ಸ್, ನೇರ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸಿಬ್ಬಂದಿ, ಟ್ರ್ಯಾಕ್ಟರ್, ಜೆಸಿಬಿ ಚಾಲಕರ ಕನಿಷ್ಟ 4 ತಿಂಗಳ ಸಂಬಳ ಸೆರಿದಂತೆ ಕೆಲವು ಕಂಪ್ಯೂಟರ್ ಆಪರೇಟರ್ಗಳಿಗೆ ವರ್ಷದವರೆಗೂ ಸಂಬಳವೇ ನೀಡಿಲ್ಲ. ಕಾರ್ಮಿಕರ ಎಂಪಿಎಸ್, ಇಪಿಎ-ï ಹಣವನ್ನು ಭರಿಸಿಲ್ಲ. ಪೌರ ಕಾರ್ಮಿಕರಿಗೆ ಕೊಡುತ್ತಿದ್ದ ವಿಶೇಷ ಭತ್ಯೆ ಮೂರುವರೆ ಸಾವಿರ ಬದಲಾಗಿ ಹೆಚ್ಚುವರಿ ಮೂರುವರೆ ಸಾವಿರ ಸೇರಿ ಒಟ್ಟು 7 ಸಾವಿರ ಕೊಡಲು ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದ್ದರೂ, ಈಗ ಕೇವಲ ಮೂರುವರೆ ಸಾವಿರ ಮಾತ್ರ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.