ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಷ್ಟ್ರಪತಿ ಪುರಸ್ಕಾರ ಆಯ್ಕೆ ಸಮಿತಿಗೆ ನಾಡಿನ ಖ್ಯಾತ ಹಿರಿಯ ಸಾಂಸ್ಕೃತ ವಿದ್ವಾಂಸ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರನ್ನ ನೇಮಕ ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಶಾಸ್ತ್ರೀಯ ಭಾಷೆಗಳ ಹಿರಿಯ ವಿದ್ವಾಂಸರಿಗೆ ನೀಡುವ ‘ರಾಷ್ಟ್ರಪತಿ ಪುರಸ್ಕಾರ’ ಆಯ್ಕೆ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಮಿತಿಯ ಸದಸ್ಯರ ಅವಧಿ ಮೂರು ವರ್ಷಗಳವರೆಗೆ ಇರುತ್ತೆ. ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು, ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ.
60ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿರುವ ಪ್ರೊ.ಮಲ್ಲೇಪುರಂ ಅವರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಹಂಪಿ ವಿವಿಯ ಡೀನ್ ಹಾಗೂ ಪ್ರಸಾರಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪುಸ್ತುತ ಕಲಬುರಗಿಯಲ್ಲಿರುವ ಪಾಲಿ ಇನ್ಸ್ ಟಿಟ್ಯೂಟ್ ನ ಗೌರವ ನಿರ್ದೇಶಕರಾಗಿದ್ದಾರೆ. ಇವರ ಸಂಸ್ಕೃತ ಪಾಂಡಿತ್ಯಕ್ಕೆ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ‘ಶಾಸ್ತ್ರಚೂಡಾಮಣಿ’ ಎಂದು ಗೌರವಿಸಿದೆ. ಸಾಹಿತ್ಯ ಅಕಾಡಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ. ಇದೀಗ ರಾಷ್ಟ್ರಪತಿ ಪುರಸ್ಕಾರ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದಕ್ಕೆ ಅವರ ಶಿಷ್ಯರು, ಅಭಿಮಾನಿಗಳು, ಹಿತೈಷಿಗಳು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.