ಪ್ರಜಾಸ್ತ್ರ ಸುದ್ದಿ
ಹಾವೇರಿ: ಕೃಷಿ, ಸ್ವಂತ ಉದ್ಯೋಗ, ಖಾಸಗಿ ಕಂಪನಿಯಲ್ಲಿ ಕೆಲಸ ಸೇರಿದಂತೆ ಕೈ ತುಂಬ ಸಂಬಳ ಪಡೆಯುವ ಕೆಲಸ ಮಾಡುತ್ತಿದ್ದರೂ ಮದುವೆಗೆ ಹೆಣ್ಣು ಕೊಡುತ್ತಿಲ್ಲ ಅನ್ನೋದು ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ವಾಸ್ತವದಲ್ಲಿ ಹೀಗಿರುವುದು ಸಹ ಸತ್ಯ. ಸರ್ಕಾರಿ ನೌಕರಿ ಇದ್ದರೆ ಮಾತ್ರ ವಧು ಕೊಡುತ್ತೇವೆ ಎಂದು ಪೋಷಕರು ಹೇಳುತ್ತಿರುವುದರಿಂದ ಯುವಕರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈಗ ಇದೆ ಕಾರಣಕ್ಕೆ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಮಂಜುನಾಥ ನಾಗನೂರು ಎಂಬಾತ ಕಳೆದ ಏಳೆಂಟು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದು, ಯಾರೂ ಹೆಣ್ಣು ಕೊಟ್ಟಿಲ್ಲ. ಇದರಿಂದ ಮನನೊಂದು ಜೂನ್ 15ರಂದು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದ ಕುಟುಂಬಸ್ಥರು ಗ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಜೂನ್ 21ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದೆ ರೀತಿ ಇತ್ತೀಚೆಗೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಯುವಕನು ಸಹ ಆತ್ಮಹತ್ಯೆಗೆ ಯತ್ನಿಸಿದ್ದ. ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಹುಡುಗನಿಗೆ ಸರ್ಕಾರಿ ನೌಕರಿ ಇರಬೇಕು, ಜಮೀನು ಇರಬೇಕು, ಸ್ವಂತ ಮನೆ ಇರಬೇಕು ಅಂತಾ ಹತ್ತಾರು ಷರತ್ತುಗಳನ್ನು ಹೆಣ್ಮಕ್ಕಳ ಪೋಷಕರು ಹಾಕುತ್ತಿರುವುದು ಹಾಗೂ ಹೆಣ್ಮಕ್ಕಳು ಸಹ ಅತಿಯಾದ ಬೇಡಿಕೆ ಇಟ್ಟುಕೊಳ್ಳುತ್ತಿರುವ ಪರಿಣಾಮ ಈ ತರಹದ ಘಟನೆಗಳು ಸಾಮಾನ್ಯವಾಗುತ್ತಿರುವುದು ನಿಜಕ್ಕೂ ದುರಂತವೇ ಸರಿ.