ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮಣಿಪುರದಲ್ಲಿ ಕಳೆದ 72 ದಿನಗಳ ಹಿಂದೆ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬೆತ್ತಲೆ ಮೆರವಣಿಗೆ ಮಾಡಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಪೈಶಾಚಿಕ ಕೃತ್ಯವೆಸಗಿದ್ದಾರೆ.
ಘಟನೆ ನಡೆದು ಎರಡು ತಿಂಗಳ ಬಳಿಕ ಪ್ರಧಾನಿ ಮೋದಿ ಮೌನ ಮುರಿದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ವಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ವಾಗ್ದಾಳಿ ನಡೆಸಿವೆ. ಇದೀಗ ಬಾಲಿವುಡ್ ನ ನಟ, ನಟಿಯರು, ನಿರ್ದೇಶಕರ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಟನೆಯ ಜೊತೆಗೆ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ನಟ ಸೂನ್ ಸೂದ್ ಟ್ವೀಟ್ ಮಾಡಿದ್ದು, ಮಣಿಪುರ ದೃಶ್ಯಗಳು ಪ್ರತಿಯೊಬ್ಬರ ಆತ್ಮವನ್ನು ಅಲುಗಾಡಿಸಿದೆ. ಮೆರವಣಿಗೆ ನಡೆಸಿದ್ದು ಮಾನವೀಯತೆಯದ್ದು ಮಹಿಳೆಯರನ್ನಲ್ಲ ಅಂತಾ ಕಿಡಿ ಕಾರಿದ್ದಾರೆ.
ಮಣಿಪುರ ಹಿಂಸಾಚಾರ ಭಯಾನಕವಾಗಿದೆ. ನನ್ನನ್ನು ಸೇರಿ ಕೋಟ್ಯಾಂತರ ಜನರನ್ನು ನಡುಗಿಸಿದೆ. ಆದಷ್ಟು ಬೇಗ ಆ ಮಹಿಳೆಯರಿಗೆ ನ್ಯಾಯ ಸಿಗಲಿ. ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಎದುರಿಸಬೇಕಿದೆ ಎಂದು ನಟಿ ಕಿಯಾರಾ ಅಡ್ವಾಣಿ ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರ ಸಹ ಟ್ವೀಟ್ ಮಾಡಿದ್ದು, ಪ್ರತಿ ಬಾರಿಯೂ ನಮ್ಮ ಮುಗ್ದ ತಾಯಿಯಂದಿರು, ಸಹೋದರಿಯರು ಅಮಾನವೀಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಒಬ್ಬ ಭಾರತೀಯನಾಗಿ, ಮನುಷ್ಯನಾಗಿ ಪ್ರತಿ ಬಾರಿಯೂ ಛಿದ್ರವಾಗಿದ್ದೇನೆ. ನನ್ನ ಅಸಹಾಯಕತೆಗೆ ನಾನು ತಪ್ಪಿತಸ್ಥನಾಗಿದ್ದೇನೆ. ನನಗೆ ನಾಚಿಕೆಯಾಗುತ್ತಿದೆ ಅಂತಾ ಬರೆಯುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.