ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಧಿವೇಶನದಿಂದ ಬಿಜೆಪಿಯ 10 ಸದಸ್ಯರನ್ನು ಅಮಾನತುಗೊಳಿಸಿದ ಸ್ಪೀಕರ್ ಯು.ಟಿ ಖಾದರ್ ನಡೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಖಂಡಿಸಿವೆ. ಗುರವಾರ ಪ್ರತಿಭಟನೆ ಮಾಡುವುದರ ಜೊತೆಗೆ ಕಲಾಪದಿಂದ ದೂರು ಉಳಿದರು.
ಬಿಜೆಪಿ, ಜೆಡಿಎಸ್ ನಿಯೋಗ ರಾಜ್ಯಪಾಲರ ಬಳಿ ತೆರಳಿ, ಬಿಜೆಪಿ ಸದಸ್ಯರ ಅಮಾನತು ಹಾಗೂ ಸಭಾಪತಿ ಖಾದರ್ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದರು. ನಂತರ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಳೆದ ಮೂರು ವಾರಗಳಿಂದ ಸದನದಲ್ಲಿ ಏನು ನಡೆದಿದೆ ಅನ್ನೋದರ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೇವೆ. ಏಕಕಾಲದಲ್ಲಿ 10 ಸದಸ್ಯರನ್ನು ಅಮಾನತು ಮಾಡಿದ್ದು ಇತಿಹಾಸದಲ್ಲೇ ಇಲ್ಲ. ಇದು ಸರ್ವಾಧಿಕಾರಿ ನಡೆ ಎಂದು ಖಂಡಿಸಿದರು.
ಬಿಜೆಪಿ ನೀಡಿರುವ ಲೆಟರ್ ಹೆಡ್ ನಲ್ಲಿಯೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿ ಇತರೆ ಶಾಸಕರು ಸಹಿ ಹಾಕಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಶಾಸಕರಾದ ಆರ್.ಅಶೋಕ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಜೆಡಿಎಸ್ ಶಾಸಕರಾದ ಹೆಚ್.ಡಿ ರೇವಣ್ಣ, ಜಿ.ಟಿ ದೇವೇಗೌಡ, ಪರಿಷತ್ ಜೆಡಿಎಸ್ ಸದಸ್ಯ ಸರವಣ ಸೇರಿ ಅನೇಕರು ಹಾಜರಿದ್ದರು.