ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಏಪ್ರಿಲ್ 3ರ ನುಸಕಿನಲ್ಲಿ ಬೆಂಗಳೂರಿನ ವಸಂತನಗರದ ಅಂಡರ್ ಪಾಸ್ ನಲ್ಲಿರುವ ಪಿಲ್ಲರ್ ಗೆ ಅವರಿದ್ದ ಜಾಗ್ವಾರ್ ಕಾರು ಡಿಕ್ಕಿ ಹೊಡೆದು ಅದರಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ನಟಿ ಶರ್ಮಿಳಾ ಮುಖಕ್ಕೂ ಗಾಯವಾಗಿದ್ದು ಇದೀಗ ಸರ್ಜರಿ ಮಾಡಲಾಗಿದೆ.
ಹೆಬ್ಬಾಳ ಸಮೀಪದ ಆಸ್ಪತ್ರೆಯೊಂದರಲ್ಲಿ ನಟಿಗೆ ಸರ್ಜರಿ ಮಾಡಲಾಗಿದೆ. ಆದ್ರೆ, ಲಾಕ್ ಡೌನ್ ನಡುವೆ ನಟಿ ಬೆಳ್ಳಂಬೆಳಗ್ಗೆ ಎಲ್ಲಿಗೆ ಹೊರಟಿದ್ರು.. ಇದು ಜಾಲಿ ರೈಡ್ ಆಗಿದೆ.. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದ್ವು. ನಟಿ ಶರ್ಮಿಳಾ ಇದೆಲ್ಲ ಸುಳ್ಳು. ಹೊಟ್ಟೆನೋವು ಕಾಣಿಸಿಕೊಂಡಿತ್ತು. ಮಾತ್ರೆ ತರಲು ಸ್ನೇಹಿತರ ಬಳಿ ಹೆಲ್ಪ್ ಕೇಳಿದ್ದೆ. ಹೀಗಾಗಿ ಅವರು ಕಾರ್ ತಂದಿದ್ರು, ಮಾತ್ರೆ ತರಲು ಹೋಗಿದ್ವಿ ಅಂದಿದ್ದಾರೆ.
ಲಾಕ್ ಡೌನ್ ಇದೆ. 144 ಸೆಕ್ಷನ್ ಜಾರಿಯಲ್ಲಿದೆ. ಇದರ ನಡುವೆ ನಿಷೇಧಾಜ್ಞೆ ವಿನಾಯಿತಿ ಪಾಸ್ ನ್ನ ಕಾರ್ ಮಾಲೀಕ ಡಾನ್ ಥಾಮಸ್ ಪಡೆದಿದ್ದಾರೆ. ನಟಿ ಶರ್ಮಿಳಾ ಅವರು ಪಾಸ್ ಪಡೆದುಕೊಂಡಿದ್ದಾರೆ. ಇದರ ದುರ್ಬಳಿಕೆಯಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡ್ತಿರುವುದ್ರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ನಟಿ ಗುಣಮುಖರಾದ್ಮೇಲೆ ಅವರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸ್ರು ತಿಳಿಸಿದ್ದು, ಫೋನ್ ಕಾಲ್, ಸಿಸಿಟಿವಿ ದೃಶ್ಯ ಸೇರಿದಂತೆ ಕೆಲ ದಾಖಲೆಗಳನ್ನ ಕಲೆ ಹಾಕಲಾಗ್ತಿದೆ.