ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡುವ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಅಕ್ಕಿ ಜೊತೆಗೆ ರಾಗಿ ಕೊಡಲು ಚಿಂತನೆ ನಡೆಸಿದೆ. ಜೋಳ, ರಾಗಿ ಕೊಡಲು ಸಿಎಂ ಸಲಹೆ ನೀಡಿದ್ದಾರೆ ಎಂದು ಆಹಾರ ಖಾತೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಜೊತೆಗೆ ಹಣ ನೀಡಲಾಗುತ್ತಿದೆ. ಶನಿವಾರದಿಂದಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಸಧ್ಯ ರಾಗಿ ದಾಸ್ತಾನು ಇದೆ. ಜೋಳ ಇಲ್ಲ. ಹೀಗಾಗಿ ಜೋಳ ದಾಸ್ತಾನು ಮಾಡಿದ ನಂತರ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ಜೋಳ ಉತ್ತರ ಕರ್ನಾಟಕ ಭಾಗದಲ್ಲಿ, 2 ಕೆಜಿ ರಾಗಿ ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಡಲಾಗುವುದು ಎಂದರು.
ಅಕ್ಕಿ ದಾಸ್ತಾನು ಆದ ನಂತರ ಪೂರ್ತಿಯಾಗಿ ಅಕ್ಕಿಯನ್ನೇ ನೀಡುತ್ತಾರೋ, ಅಕ್ಕಿ ಜೊತೆಗೆ ಜೋಳ, ರಾಗಿ ಸೇರಿಸಿ ಕೊಡುತ್ತಾರೋ ಅನ್ನೋ ಸ್ಪಷ್ಟತೆಯಿಲ್ಲ. ಕೆಲ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ, ನಂತರ ಜೋಳ, ರಾಗಿ ಅಂತಾದರೆ ಪೂರ್ತಿ 10 ಕೆಜಿ ಅಕ್ಕಿ ಸಿಗೋದು ಅನುಮಾನ ಎನ್ನಲಾಗುತ್ತಿದೆ.