ಪ್ರಜಾಸ್ತ್ರ ಸುದ್ದಿ
ರಾಯಚೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಬಿಸಿ ಊಟದ ಉಪ್ಪಿಟ್ಟಿನಲ್ಲಿ ಹಲ್ಲಿ ಬಿದ್ದಿದ್ದು, ಅದನ್ನು ಸೇವಿಸಿದ 70 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ.
ಅಸ್ವಸ್ಥಗೊಂಡ 30 ವಿದ್ಯಾರ್ಥಿಗಳನ್ನು ಯಪಲದಿನ್ನಿ ಆಸ್ಪತ್ರೆ, 20 ವಿದ್ಯಾರ್ಥಿಗಳನ್ನು ರಿಮ್ಸ್ ಆಸ್ಪತ್ರೆ ಹಾಗೂ ಉಳಿದ ವಿದ್ಯಾರ್ಥಿಗಳು ಶಾಲೆ ಹತ್ತಿರವೇ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಬಳಿ ಜಮಾಯಿಸಿದರು.
ಸ್ಥಳಕ್ಕೆ ಡಿಎಚ್ಓ ಡಾ.ಸುರೇಂದ್ರ ಬಾಬು ಭೇಟಿ ಕೊಟ್ಟು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಸಧ್ಯ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ವೈದ್ಯರ ತಂಡವನ್ನು ಇರಿಸಲಾಗಿದೆ. ಘಟನೆಗೆ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ.