ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ನಿಂದ ಬಂದವರಿಂದ ಬಿಜೆಪಿಯಲ್ಲಿ ಅಶಿಸ್ತು ಆಗಿದೆ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೀಡಿದ್ದ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡಿತು. ಇದರಿಂದ ವಲಸೆ ನಾಯಕರು ಗರಂ ಆಗಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಈಶ್ವರಪ್ಪ, ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರ ಬಗ್ಗೆ ನಾನು ಒಂದು ಪದವೂ ಬಳಸಿಲ್ಲ ಎಂದಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಶಿಸ್ತು ಹೊಸದಲ್ಲ. ಕಾಂಗ್ರೆಸ್ ಗಾಳಿ ಬಿಜೆಪಿಗೂ ಬೀಸಿದೆ ಎಂದು ಹೇಳಿದ್ದೆ. ಆದರೆ, ಬಿಜೆಪಿ ಸೇರಿದ 17 ಜನರ ಜೊತೆ ಅದನ್ನು ಸೇರಿಸುವ ಕೆಲಸ ನಡೆಯಿತು. ಅವರು ಬಂದಿದ್ದರಿಂದಲೇ ನಾವು ಅಧಿಕಾರ ಹಿಡಿದಿದ್ದು, ನಾನು ಮಂತ್ರಿಯಾಗಿದ್ದು ಎಂದರು.
ಕೆಲವರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಕರೆದು ಮಾತನಾಡಿದ್ದಾರೆ. ಇನ್ನು ಮುಂದೆ ಯಾರೂ ಬಹಿರಂಗ ಹೇಳಿಕೆ ಕೊಡುವುದಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತು ಇರಲಿದೆ. ಇನ್ನು ಕಾಂಗ್ರೆಸ್ ಘೋಷಣೆ ಮಾಡಿರುವ ಐದು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸಲು ವಿಫಲರಾಗಿದ್ದಾರೆ. ರಾಜ್ಯದ ಜನರಿಗೆ ಟೋಪಿ ಹಾಕಬೇಡಿ. ಹೇಳಿದಂತೆ ನಡೆದುಕೊಳ್ಳಿ ಅಂತಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.