ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಬಂಡಾಯವೆದ್ದಿರುವ ಕೆ.ಎಸ್ ಈಶ್ವರಪ್ಪ ಕೊನೆಗೂ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರು ನಡೆಸಿದ ಯಾವ ಸಂಧಾನಗಳು ಫಲ ನೀಡಲಿಲ್ಲ. ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬರುತ್ತಿರುವ ಈಶ್ವರಪ್ಪ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕೋಟೆ ಆಂಜನೇಯ ಹಾಗೂ ಕೋಟಿ ಮಾರಿಕಾಂಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಬೃಹತ್ ಸಂಖ್ಯೆಯಲ್ಲಿ ಜನರು ನನಗೆ ಬೆಂಬಲ ನೀಡುತ್ತಿರುವುದಕ್ಕೆ ಧನ್ಯವಾದಗಳು. ಎಲ್ಲ ಜಾತಿ, ಧರ್ಮದ ಜನರ ಆಸೆ ನಾನು ಗೆಲ್ಲುವುದಾಗಿದೆ ಎಂದರು.
ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕೈಯಲ್ಲಿದೆ. ಕುಟುಂಬ ರಾಜಕಾರಣದ ವಿರುದ್ಧ ಸ್ಪರ್ಧಿಸಿದ್ದೇನೆ ಎಂದರು. ತೆರೆದ ವಾಹನದೊಂದಿಗೆ ರೋಡ್ ಶೋ ಮಾಡಿದ ವೇಳೆ ಒಂದು ಕಡೆ ತಮ್ಮ ಫೋಟೋ ಮತ್ತೊಂದು ಕಡೆ ಪ್ರಧಾನಿ ಮೋದಿ ಫೋಟೋ ಹಾಕಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದರೂ ಮೋದಿ ಜಪ ಮಾಡುತ್ತಿರುವ ಈಶ್ವರಪ್ಪಗೆ ಇದು ಎಷ್ಟು ಕೈ ಹಿಡಿಯುತ್ತೆ ಅನ್ನೋ ಯಕ್ಷ ಪ್ರಶ್ನೆ ಇದೆ.
ನಾಮಪತ್ರ ಸಲ್ಲಿಕೆ ವೇಳೆ ಪತ್ನಿ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸೇರಿ ಇತರರು ಉಪಸ್ಥಿತರಿದ್ದರು. ಬಿಜೆಪಿಯಿಂದ ಬಿ.ವೈ ರಾಘವೇಂದ್ರ, ಕಾಂಗ್ರೆಸ್ ನಿಂದ ಗೀತಾ ಶಿವರಾಜಕುಮಾರ್ ಸ್ಪರ್ಧಿಸುತ್ತಿದ್ದಾರೆ.