ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ಸಂಬಂಧ ಹಲವು ರೀತಿಯ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮಾತನಾಡಿರುವ ನಟ, ಇದೊಂದು ಆಕಸ್ಮಿಕ ಘಟನೆ. ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದಿದ್ದಾರೆ.
ಅಪಘಾತವಾದ ಸಂದರ್ಭದಲ್ಲಿ ನಾನು ಓಡಿ ಹೋಗಲಿಲ್ಲ. ಆ ವೇಳೆ ಮನುಷ್ಯನಾಗಿ ಏನು ಮಾಡಬೇಕು ಅದನ್ನು ಮಾಡಿದ್ದೇನೆ. ನನಗಿಂತ ಹೆಚ್ಚು ನೋವು ಅವರಿಗೆ ಆಗಿದೆ ಅನ್ನೋ ಅರಿವು ನನಗಿದೆ. ಗೌರಿ ಹಬ್ಬದ ಸಂದರ್ಭದಲ್ಲಿಯೇ ಅಪಘಾತದಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ಹಿಟ್ ಅಂಡ್ ರನ್ ಎಂದು ಹೇಳಬೇಡಿ ಎಂದು ನೋವು ತೋಡಿಕೊಂಡಿದ್ದಾರೆ.
ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ಸೆಪ್ಟೆಂಬರ್ 30ರ ರಾತ್ರಿ ನಡೆದ ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಎಸ್.ಪ್ರೇಮಾ(48) ಎಂಬುವರು ಮೃತಪಟ್ಟಿದ್ದಾರೆ. ಅವರ ಪತಿ ಬಿ.ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.