ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಲೇ ಇದೆ. ಇಂದು ಸಹ ಇದಕ್ಕೆ ತೆರೆ ಬಿದ್ದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದು ಮೂಡಿದ್ದು, ಇಬ್ಬರು ಸಹ ತಮ್ಮ ವಾದದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಸಿಎಂ ಯಾರು ಅನ್ನೋದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.
ಕೆಲ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೇಳಲಾಗಿದೆ. ನಾಳೆ ಮಧ್ಯಾಹ್ನ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ನಡೆಯಲಿದೆ ಎಂದು ಹೇಳಲಾಗಿತ್ತು. ಇದರಿಂದ ಅವರ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದರು. ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಎಐಸಿಸಿಯಿಂದ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಆಯ್ಕೆ ಮಾಡಲಾಗಿದೆ ಅನ್ನೋ ಸುದ್ದಿಗೆ ಸಂಸದ ಡಿ.ಕೆ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಯಾರೋ ಫ್ರಾಡ್ ಗಳು ನೀಡಿದ ಸುಳ್ಳು ಮಾಹಿತಿಯಿಂದ ಸುದ್ದಿ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಎಂದರು. ಹೀಗಾಗಿ ಸಿಎಂ ಆಯ್ಕೆ ಕಗ್ಗಂಟು ಇನ್ನು ಬಿಚ್ಚಿಲ್ಲ.