ಬೆಂಗಳೂರು: ರಾಜ್ಯದಲ್ಲಿ ಕರೋನಾ ಸ್ಥಿತಿ ಮೊದಲಿಗಿಂತ ಅತಿವೇಗವಾಗಿ ವ್ಯಾಪಿಸಿಕೊಳ್ತಿದೆ. ಈ ಮೊದ್ಲೇ ತಜ್ಞರು ಹೇಳಿದಂತೆ ದಿನದಿಂದ ದಿನಕ್ಕೆ ಡಬಲ್, ತ್ರಿಬಲ್ ಏರಿಕೆಯಾಗ್ತಿದೆ. ಇದಕ್ಕೆ ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಕರ್ನಾಟಕದ ಪಾಲಿಗೆ ಮಹಾರಾಷ್ಟ್ರ ಮಗ್ಗಲುಮುಳ್ಳಾಗಿದೆ.
ಕಳೆದೊಂದು ವಾರದಿಂದ ಏರುಗತಿಯಲ್ಲಿ ಸಾಗ್ತಿರುವ ಸೋಂಕಿತರ ಸಂಖ್ಯೆ ಹಿಂದೆ, ಶೇಕಡ 99ರಷ್ಟು ಮಹಾರಾಷ್ಟ್ರದ ನಂಟಿದೆ. ಅಲ್ಲಿಂದ ಬಂದವರಲ್ಲಿ ಸೋಂಕು ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಳ್ತಿದೆ. ಇದು ರಾಜ್ಯದ ಮೂಲೆ ಮೂಲೆಗೆ ವ್ಯಾಪಿಸಿಕೊಂಡಿದೆ. ಅದರಲ್ಲೂ ಮಂಡ್ಯಕ್ಕೆ ಮಹಾರಾಷ್ಟ್ರದಿಂದ ಬಂದವರ ನಂಜು ಜೋರಾಗಿದೆ. ಕೆ.ಆರ್ ಪೇಟೆಯಲ್ಲಿ 40, ನಾಗಮಂಗಲದಲ್ಲಿ 22 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದುವರೆಗೂ 151 ಪ್ರಕರಣ ದಾಖಲಾಗಿವೆ.
ಇಂದು ಬಂದ 127 ಪ್ರಕರಣಗಳಲ್ಲಿ 91 ಜನರು ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಅಂದ್ರೆ ಶೇಕಡ 80+ ಸೋಂಕಿತರ ಸಂಖ್ಯೆ ಏರಿಕೆಗೆ ಮಹಾರಾಷ್ಟ್ರದ ಸಂಪರ್ಕ ಕಾರಣ ಅನ್ನೋದು ತಿಳಿದು ಬರ್ತಿದೆ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಅದರಲ್ಲಿ ಬೇರೆ ಇಂದಿನಿಂದ ಬಹುತೇಕ ಎಲ್ಲದಕ್ಕೂ ಅನುಮತಿ ನೀಡಲಾಗಿದೆ. ಬಸ್ ಸಂಚಾರ ಶುರುವಾಗಿದೆ. ಪರಿಸ್ಥಿತಿ ಎಲ್ಲಿಗೆ ಹೋಗುತ್ತೆ ಅನ್ನೋದು ಗೊತ್ತಾಗ್ತಿಲ್ಲ.
ಇನ್ನು ಕೇರಳ 3, ಗುಜರಾತ 2, ಆಂಧ್ರಪ್ರದೇಶ ಪ್ರಯಾಣದ ಹಿನ್ನೆಲೆ ಹೊಂದಿರುವ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯಕ್ಕೆ ಅಂತರರಾಜ್ಯ ಪ್ರಯಾಣದ ಹೊಡೆತ ಭರ್ಜರಿಯಾಗಿ ಕೊಡ್ತಿದೆ. ಮುಂದಿನ ದಿನಗಳಲ್ಲಿ ಈ ನಂಜು ಇನ್ನು ಎಷ್ಟು ಜನಕ್ಕೆ ತಗುಲುತ್ತೋ ಆ ದೇವರೆ ಬಲ್ಲ.
ನಿನ್ನೆ ಸಿಎಂ ಬಿ.ಎಸ್ ಯಡಿಯೂರಪ್ಪ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗುಜರಾತ ರಾಜ್ಯಕ್ಕೆ ಸಂಚಾರ ನಿರ್ಬಂಧ ಹೇರಿದ್ದಾರೆ. ಆದ್ರೆ, ಏನ್ಮಾಡೋದು ರಾಜ್ಯಕ್ಕೆ ಅದಾಗ್ಲೇ ಲಕ್ಷದ ತನಕ ಜನರು ಬಂದಿರಬಹುದು. ಇವರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿಯೇ ಸೋಂಕು ಕಾಣಿಸಿಕೊಳ್ತಿದ್ದು ರಾಜ್ಯದ ಜನತೆಗೆ ಇದೀಗ ಬಿಸಿ ತಟ್ಟುತ್ತಿದೆ.