ನವದೆಹಲಿ: ಅನರ್ಹ ಶಾಸಕರ ಪ್ರಕರಣ ಸಂಬಂಧ ಈಗಾಗ್ಲೇ ವಾದ, ವಿವಾದ ಮುಗಿದು ತೀರ್ಪು ಕಾಯ್ದಿರಸಲಾಗಿದೆ. ಇದರ ನಡುವೆ ಸಿಎಂ ಮಾತ್ನಾಡಿದ್ದಾರೆ ಎನ್ನಲಾಗ್ತಿರುವ ಆಡಿಯೋ, ಕಾಂಗ್ರೆಸ್ ಗೆ ದೊಡ್ಡ ಅಸ್ತ್ರವಾಗಿದೆ. ಇದನ್ನ ಇಂದು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದೆ. ಇದನ್ನ ಸುಪ್ರೀಂ ಪರಿಗಣಿಸಿದೆ. ಹೀಗಾಗಿ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಇಂದು ಬೆಳಗ್ಗೆ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದೆ ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್, ಪ್ರಬಲ ಸಾಕ್ಷಿ ಸಿಕ್ಕಿದೆ. ಇದನ್ನ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡ್ರು. ಪ್ರಕರಣದ ವಿಚಾರಣೆ ಮುಗಿದಿದೆ. ತೀರ್ಪು ಕಾಯ್ದಿರಸಲಾಗಿದೆ. ಈ ಟೈಂನಲ್ಲಿ ಸಾಕ್ಷಿಯೊಂದು ಹಾಜರು ಪಡುಸುತ್ತೀರಿ ಅಂತಾ ಹೇಳ್ತಿದ್ದೀರಿ. ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುತ್ತೇವೆ. ಅವರು ಒಪ್ಪಿದ್ರೆ ಐದು ನಿಮಿಷ ವಾದ ಮಾಡಲು ಅವಕಾಶ. ಇದಕ್ಕೆ ಪ್ರತ್ಯೇಕ ಪೀಠ ರಚನೆ ಮಾಡಲಾಗುತ್ತೆ ಅಂತಾ ಹೇಳಿದ್ದಾರೆ.
ಇತ್ತ ಅನರ್ಹರ ಪರವಾದ ವಕೀಲರು, ಈಗಾಗ್ಲೇ ವಾದ ವಿವಾದ ಮುಗಿದಿದೆ. ಹೊಸ ಸಾಕ್ಷಿ ಪರಿಗಣಿಸಬಾರದು. ಈಗಾಗ್ಲೇ ನಡೆದಿರುವ ವಾದ ವಿವಾದಗಳ ಮೇಲೆಯೇ ತೀರ್ಪು ನೀಡಬೇಕೆಂದು ಒತ್ತಾಯಿಸಿದ್ರು. ಆದ್ರೆ, ಕೋರ್ಟ್ ಸಾಕ್ಷಿ ಪರಿಗಣಿಸಲು ಸಮ್ಮತಿ ಸೂಚಿಸಿರುವುದ್ರಿಂದ ಸಿಎಂ ಬಿ.ಎಸ್ ಯಡಿಯೂರಪ್ಪ, ಅನರ್ಹ ಶಾಸಕರಿಗೆ ದೊಡ್ಡ ತಲೆ ನೋವು ಶುರುವಾಗಿದೆ.