ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ಭಯದ ವಾತಾವರಣ.. ನಾಲ್ಕಾರು ಹಳೆ ವಾಹನಗಳು.. ಬಣ್ಣ ಮಾಸಿದ ಗೋಡೆ, ಗಿಡ ಗಂಟಿಗಳು.. ಆದ್ರೇ, ಇಂದಿನ ದಿನಗಳಲ್ಲಿ ಇಲ್ಲೊಂದು ಪೊಲೀಸ್ ಠಾಣೆ ಮಾತ್ರ ಸಾಕಷ್ಟು ಡಿಫರೆಂಟ್ಯಾಗಿ ಜನಸಾಮಾನ್ಯರನ್ನ ಆಕರ್ಷಿಸುತ್ತಿದೆ. ಆ ಠಾಣೆಯ ಪಿಎಸ್ಐ ಪರಿಸರ ಪ್ರೇಮದಿಂದ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ.
ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಚಿತ್ತಾಕರ್ಷಕ ಚಿತ್ರಗಳು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಹಸಿರು ವನ, ವನದಲ್ಲಿ ಪಕ್ಷಿಗಳ ಗೂಡು, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ‘ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯಲ್ಲಿ ಆದರ್ಶ ನಗರ ಠಾಣೆ ಹೊಸ ರೂಪ ಪಡೆದುಕೊಂಡಿದೆ. ಕಳೆದ ಮೂರು ತಿಂಗಳ ಹಿಂದಷ್ಟೆ ಪಿಎಸ್ಐಯಾಗಿ ಬಂದ ಯತೀಶ್ ಕೆ.ಎನ್ ಮೊದಲು ಠಾಣೆ ವಾತಾವರಣ ಸರಿಪಡಿಸಲು ಯೋಚಿಸಿದ್ದರಂತೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸ್ಥಳೀಯರ ಸಹಕಾರದಲ್ಲಿ ಠಾಣೆಗೆ ಕಾಂಪೌಂಡ್ ನಿರ್ಮಿಸಿ, ಗೋಡೆಗಳಿಗೆ ಸುಣ್ಣ ಬಣ್ಣ ಹಚ್ಚಿ, ಅಪರಾಧ ಜಗತ್ತಿನ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನು ಸ್ಥಳೀಯ ಕಲಾವಿದರ ಸಹಾಯದಿಂದ ಬಿಡಿಸಲಾಗಿದೆ. ಇನ್ನೂ ಈ ಕಾರ್ಯಕ್ಕೆ ಖುದ್ದು ವಿಜಯಪುರ ಎಸ್ಪಿ ಹೆಚ್.ಡಿ.ಆನಂದಕುಮಾರ ಪಿ.ಎಸ್.ಐ.ಯತೀಶರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.