ಪ್ರಜಾಸ್ತ್ರ ಡೆಸ್ಕ್
ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಸುಡುಬಿಸಿಲು, ಆಗಾಗ ಸುರಿಯುತ್ತಿರುವ ಮಳೆಯ ನಡುವೆಯೂ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಬೃಹತ್ ಸಮಾವೇಶ, ರೋಡ್ ಶೋದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಆದರೆ, ಇಲ್ಲಿ ಪಕ್ಷ, ಅಭ್ಯರ್ಥಿ ಮೇಲೆ ಎಷ್ಟು ಅಭಿಮಾನ ಇದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಆದರೆ, ಪ್ರಚಾರಕ್ಕೆ ಹೋದರೆ ರೊಕ್ಕಾ ಮಾತ್ರ ಸಿಗುತ್ತೆ.
ಯಾವುದೇ ಮತಕ್ಷೇತ್ರಕ್ಕೂ ಹೋದರೂ ಪ್ರಚಾರಕ್ಕೆ ಜನರನ್ನು ಕರೆದುಕೊಂಡು ಬರುವವರಿಗೆ ಫುಲ್ ಡಿಮ್ಯಾಂಡ್, ಬರುವವರಿಗೆ ಭಾರೀ ಬೇಡಿಕೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರಲು ಒಬ್ಬರಿಗೆ ಸುಮಾರು 500 ರೂಪಾಯಿ ಖರ್ಚು ಮಾಡಲಾಗುತ್ತಿದೆ ಅನ್ನೋದು ಬಹಿರಂಗ ರಹಸ್ಯವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ.
ಗಂಡ್ಮಕ್ಕಳಿಗೆ 500 ರೂಪಾಯಿ, ಹೆಣ್ಮಕ್ಕಳಿಗೆ 300 ರೂಪಾಯಿ ಎಂದು ತೆಗೆದುಕೊಂಡು ಬಂದವರೆ ಹೇಳುತ್ತಿದ್ದಾರೆ. ಹೀಗಾಗಿ ಚುನಾವಣೆ ಮುಗಿಯುವ ತನಕ ದುಡಿಯಲು ಹೋಗದೆ ಪ್ರಚಾರ ಎಂದು ಊರೂರು ಸುತ್ತಾಡಿದರೆ ರೊಕ್ಕದ ಜೊತೆ ಊಟಾನು ಸಿಗುತ್ತೆ ಅಂತಿದ್ದಾರೆ. ಒಟ್ಟಿನಲ್ಲಿ ಇದು ಚುನಾವಣೆ ಕಾಲವಯ್ಯ ಬಂದಷ್ಟು ಬರಲಯ್ಯ ಎನ್ನುತ್ತಿರುವುದು ಮಾತ್ರ ಸತ್ಯ. ಪ್ರಜಾಪ್ರಭುತ್ವ ವ್ಯವಸ್ಥೆ ತತ್ವ ಸಿದ್ಧಾಂತಗಳು ಸಮಾಧಿ ಆಗಿರುವುದು ಸಹ ಅಷ್ಟೇ ಸತ್ಯ.