ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದೊಡ್ಡ ಹೈಡ್ರಾಮಾ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಶಾಸಕರು ರಾಜೀನಾಮೆ ನೀಡಿದ್ದು, ದೋಸ್ತಿ ಸರ್ಕಾರ ಬಹುತೇಕ ಖತಂ ಆಗಿದ್ರೂ, ಗುಟುಕು ಜೀವ ಹಿಡಿದು ಬದುಕುತ್ತಿದೆ.
ಕಾಂಗ್ರೆಸ್ ಶಾಸಕರಾದ ರಮೇಶ ಜಾರಕಿಹೊಳಿ(ಗೋಕಾಕ), ಮಹೇಶ ಕುಮಟಳ್ಳಿ(ಅಥಣಿ), ಶಿವರಾಮ ಹೆಬ್ಬಾರ(ಯಲ್ಲಾಪುರ), ಟಿ.ಸೋಮಶೇಖರ(ಯಶವಂತಪುರ), ಬಿ.ಸಿ ಪಾಟೀಲ(ಹಿರೇಕೆರೂರು), ಪ್ರತಾಪಗೌಡ ಪಾಟೀಲ(ಮಸ್ಕಿ), ಮುನಿರತ್ನ (ರಾಜರಾಜೇಶ್ವರನಗರ) ಹಾಗೂ ಜೆಡಿಎಸ್ ಶಾಸಕರಾದ ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ಹೆಚ್.ವಿಶ್ವನಾಥ(ಹುಣಸೂರು), ನಾರಾಯಣಗೌಡ(ಕೆ.ಆರ್ ಪೇಟೆ) ಇವರಿಷ್ಟು ಶಾಸಕರು ಮುಂಬೈನಿಂದ ಸಂಜೆ 6 ಗಂಟೆ 2 ನಿಮಿಷಕ್ಕೆ ವಿಧಾನಸೌಧಕ್ಕೆ ಬಂದ್ರು. ಸುಪ್ರೀಂ ಸೂಚನೆ ಮೇರೆಗೆ ಸ್ಪೀಕರ್ ರಮೇಶಕುಮಾರ ಅವರನ್ನ ಖುದ್ದಾಗಿ ಭೇಟಿಯಾಗಿದ್ದಾರೆ.
ಇದರ ಜೊತೆಗೆ ಶಿವಾಜಿನಗರದ ಶಾಸಕ ರೋಷನ ಬೇಗ, ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ, ಹೊಸಕೋಟೆ ಶಾಸಕ ಹಾಗೂ ವಸತಿ ಸಚಿವರಾಗಿದ್ದ ಎಂಟಿಬಿ ನಾಗರಾಜ, ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ ಅವರು ಸಹ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಯಾವ ಶಾಸಕರು ರಾಜೀನಾಮೆಯಿಂದ ಹಿಂದೆ ಸರಿಯದಿರಲು ನಿರ್ಧಾರಸಿದ್ದಾರೋ ಅವರ ವಿರುದ್ಧ ಅನರ್ಹತೆ ಅಸ್ತ್ರ, ವಿಪ್ ಜಾರಿಗೊಳಿಸುವ ಪ್ಲಾನ್ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಿದೆ.
ಇದರ ಜೊತೆಗೆ ವಿಪ್ ಜಾರಿ ಮಾಡುವ ಮೂಲಕ ವಿಧಾನಸಭೆಯ ಸದನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಅಂತಾ ಹೇಳಲು ಹೊರಟಿದೆ. ಆದ್ರೆ, ಇವರೆಲ್ಲ ಈ ಮೊದ್ಲೇ ರಾಜೀನಾಮೆ ಸಲ್ಲಿಸಿದ್ದು, ಇದರಲ್ಲಿ 8 ಜನರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಅಂತಾ ಸ್ಪೀಕರ್ ಹೇಳಿದ್ದಾರೆ. ಹೀಗಾಗಿ ಇಂದು ಮತ್ತೊಂದು ಪತ್ರವನ್ನ ನೀಡಿದ್ರೂ, ಅದು ಮೊದಲು ನೀಡಿದ ದಿನಾಂಕಿಗೆ ಸೇರಿಕೊಳ್ಳುತ್ತಾ ಇಲ್ವಾ ಅನ್ನೋ ಪ್ರಶ್ನೆಯಿದೆ. ಹೀಗಾಗಿ ಇವರ ವಿರುದ್ಧ ವಿಪ್ ಜಾರಿ ಮಾಡಲು ಬರೋದಿಲ್ಲ ಎನ್ನಲಾಗ್ತಿದೆ.