ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿಎ ಕೆ.ಆರ್ ಪುರದಲ್ಲಿ 3ನೇ ದಿನದ ಕಾರ್ಯಾಚರಣೆ ನಡೆದಿದೆ. ಈ ವೇಳೆ ದಂಪತಿಯೊಬ್ಬರು ಮನೆ ಕೆಡವಿದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಸವನಪುರ ಮುಖ್ಯರಸ್ತೆಯ ಎಸ್.ಆರ್ ಲೇಔಟ್ ನಲ್ಲಿ ವಾಸವಾಗಿರುವ ಸುನಿಲ್ ಸಿಂಗ್ ಹಾಗೂ ಸೋನಾ ಸೇನ್ ದಂಪತಿ ಪೆಟ್ರೋಲ್ ತುಂಬಿರುವ ಬಾಟಲ್ ಹಿಡಿದುಕೊಂಡು ನಿಂತಿದ್ದಾರೆ. ನಾವು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದೇವೆ. ನಾವು ಕರ್ನಾಟಕದವರೆ. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ? ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಇದು ನಮ್ಮ ಕನಸಿನ ಮನೆ. ಕಷ್ಟಪಟ್ಟು ಕಟ್ಟಿದ್ದೇವೆ. ಕೆಡವಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಸ್ಥಳೀಯರು, ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರು. ಮನೆ ಕಟ್ಟಿಸಿಕೊಳ್ಳಲು ಪರವಾನಿಗೆ ನೀಡುವ ವೇಳೆ ಅಧಿಕಾರಿಗಳಿಗೆ ಅಲ್ಲಿ ರಾಜಕಾಲುವೆ ಇತ್ತು ಅನ್ನೋ ಪರಿಜ್ಞಾನ ಇರಲಿಲ್ಲವಾ? ಬಿಬಿಎಂಪಿಯಲ್ಲಿ ರಾಜಕಾಲುವೆ ಎಲ್ಲೆಲ್ಲಿ ಇದೆ ಅನ್ನೋದರ ಮ್ಯಾಪ್ ಇಲ್ಲವಾ? ಜಾಗ ಮಾರಾಟದ ವೇಳೆ ಮಾಲೀಕರಿಗೂ ಇದು ಗೊತ್ತಿರಲಿಲ್ಲವಾ ಅನ್ನೋದು ಸೇರಿ ಹಲವು ಪ್ರಶ್ನೆಗಳು ಮಧ್ಯಮ ಹಾಗೂ ಬಡ ಜನರು ಕೇಳುತ್ತಿದ್ದಾರೆ.