ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮನೆಗೆ ದೀಪಾಲಂಕಾರ ಮಾಡಲಾಗಿತ್ತು. ಆದರೆ, ಇದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಇದನ್ನು ಸ್ವತಃ ಕುಮಾರಸ್ವಾಮಿಯವರೆ ಒಪ್ಪಿಕೊಂಡಿದ್ದರು.
ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿತು. ಅವರ ಮನೆಗೆ ವಿದ್ಯುತ್ ಕಳ್ಳ ಎನ್ನುವ ಪೋಸ್ಟರ್ ಸಹ ಅಂಟಿಸಿ ರಾಜಕೀಯ ಮಾಡಲಾಯಿತು. ಈ ಸಂಬಂಧ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಬೆಸ್ಕಾಂಗೆ ದಂಡ ಕಟ್ಟಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಾಧ್ಯಮಗೋಷ್ಠಿ ನಡೆಸಿದ ಅವರು, ನಾನು ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಈಗ ಬೆಸ್ಕಾಂಗೆ 68 ಸಾವಿರದ 526 ರೂಪಾಯಿ ದಂಡ ಕಟ್ಟಿದ್ದೇನೆ. ಅದೇನೋ ವಿದ್ಯುತ್ ಕಳ್ಳ ಅಂತಿದ್ದರಲ್ಲ ಅದನ್ನು ನಿಲ್ಲಿಸಿಬಿಡಿ ಎಂದರು.
2.25 ಕಿಲೋ ವ್ಯಾಟ್ ವಿದ್ಯುತ್ ಅಕ್ರಮವಾಗಿ ಬಳಕೆ ಮಾಡಿದ್ದೇನೆ ಎಂದು ನನಗೆ 68,526 ರೂಪಾಯಿ ಬಿಲ್ ಕೊಟ್ಟಿದ್ದಾರೆ. ದಂಡದ ಬಿಲ್ ಕಟ್ಟಿದ್ದೇನೆ. ತಪ್ಪು ಬಿಲ್ ಕೊಟ್ಟಿದ್ದಾರೋ ಸರಿ ಬಿಲ್ ಕಟ್ಟಿದ್ದಾರೋ ಗೊತ್ತಿಲ್ಲ. ದಂಡ ಕಟ್ಟಿದ್ದೇನೆ. ನನ್ನ ಮನೆಗೆ 33 ಕಿಲೋ ವ್ಯಾಟ್ ವಿದ್ಯುತ್ ಪರವಾನಿಗೆ ಪಡೆದಿದ್ದೇನೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ನನಗೆ ವಿದ್ಯುತ್ ಕಳ್ಳ ಪಟ್ಟ ಕಟ್ಟಿದ್ದಾರೆ. ಅದನ್ನು ನಿಲ್ಲಿಸಿಬಿಡಿ ಅಂತಾ ಹೇಳುವ ಅಸಮಾಧಾನ ಹೊರ ಹಾಕಿದರು.